ಬೆಂಗಳೂರು : ವಸತಿ ಯೋಜನೆಗಳಿಗೆ ಆಯ್ಕೆ ಮಾಡುವಾಗ ಶಾಸಕರ ಹಕ್ಕನ್ನು ಮೊಟಕುಗೊಳಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ವಿಧಾನಸಭೆಯಲ್ಲಿಂದು ಸ್ಪಷ್ಟಪಡಿಸಿದರು. ಶಾಸಕ ರಘುಮೂರ್ತಿ ಅವರು, ನನ್ನ ಕ್ಷೇತ್ರವಾದ ಚಳ್ಳಕೆರೆಯಲ್ಲಿ ಮಂಜೂರಾಗಿದ್ದ ಮನೆಗಳನ್ನು ರದ್ದುಪಡಿಸಲಾಗಿದೆ.
ನಿಮ್ಮ ಪಕ್ಷದ ಪದಾಕಾರಿಗಳು ಒತ್ತಡ ಹಾಕಿದರು ಎಂಬ ಒಂದೇ ಕಾರಣಕ್ಕಾಗಿ ಯೋಜನೆಯನ್ನು ಸ್ಥಗಿತ ಮಾಡಲಾಗಿದೆ. ಇದು ಸರಿಯೇ ಎಂದು ಪ್ರಶ್ನಿಸಿದರು.
ಇದು ಕೇವಲ ಚಳ್ಳಕೆರೆ ಸಮಸ್ಯೆಯಲ್ಲ. ರಾಜ್ಯದ ಅನೇಕ ಕಡೆ ನಿಮ್ಮ ಪದಾಕಾರಿಗಳು ಮಂಜೂರಾಗಿದ್ದ ಯೋಜನೆಗಳನ್ನೇ ರದ್ದುಪಡಿಸುತ್ತಿದ್ದಾರೆ. ಶಾಸಕರಾಗಿದ್ದ ನಾವು ಇದನ್ನು ನೋಡಿಕೊಂಡು ಸುಮ್ಮನಿರಬೇಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಮ್ಮ ಹಿಂಬಾಲಕರಿಗೆ ಮನೆಗಳನ್ನು ಮಂಜೂರು ಮಾಡಿಸಲು ಶಾಸಕರ ಹಕ್ಕುಗಳನ್ನೇ ಮೊಟಕುಗೊಳಿಸುತ್ತಿದ್ದಾರೆ. ದಯವಿಟ್ಟು ಸಚಿವರು ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸೋಮಣ್ಣ, ನಾನು ಯಾವುದೇ ಶಾಸಕರ ಹಕ್ಕನ್ನು ಮೊಟಕುಗೊಳಿಸುವ ಉದ್ದೇಶ ಹೊಂದಿಲ್ಲ.
ಪ್ರತಿಯೊಬ್ಬ ಶಾಸಕರ ಬೇಡಿಕೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಚಳ್ಳಕೆರೆಯಲ್ಲಿ ವಸತಿ ಯೋಜನೆಯಡಿ ಮಂಜೂರಾಗಿದ್ದ ಮನೆಗಳಿಗೆ ಕಾಮಗಾರಿ ಆರಂಭಿಸಲು ಅಕಾರಿಗಳಿಗೆ ಸೂಚಿಸುತ್ತೇನೆ. ಮುಂದಿನ ವಾರ ನಾನೇ ಅವರ ಕ್ಷೇತ್ರಕ್ಕೆ ಭೇಟಿ ಕೊಟ್ಟು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದರು.