ಬೆಂಗಳೂರು: ರಾಜ್ಯಸಭೆಯಲ್ಲಿ ನಡೆಯುವ ಮಾದರಿಯಲ್ಲಿಯೇ ವಿಧಾನ ಪರಿಷತ್ತಿನ ಕಲಾಪಗಳನ್ನು ಇನ್ನು ಮುಂದೆ ನಡೆಸಲು ತೀರ್ಮಾನಿಸಲಾಗಿದೆ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಫೆ.14ರಿಂದ ಕರ್ನಾಟಕ ವಿಧಾನ ಮಂಡಲದ ಅಧಿವೇಶನವು ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸಭೆಯಲ್ಲಿ ಅನುಸರಿಸುವ ನಿಯಮಗಳು, ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕೆಂದಿದ್ದೇವೆ. ಈ ಸಂಬಂಧ ರಾಜ್ಯಸಭೆ ಅಧಿವೇಶನ ನಡೆಯುವ ವೇಳೆ ದೆಹಲಿಗೆ ತೆರಳಿ ಅಲ್ಲಿನ ಕಾರ್ಯಕಲಾಪಗಳನ್ನು ವೀಕ್ಷಿಸಿ ಆ ಪದ್ದತಿಯನ್ನು ನಾವು ಅಳವಡಿಸಿ ಕೊಳ್ಳಬೇಕೆಂದಿದ್ದೇವೆ ಎಂದು ತಿಳಿಸಿದ್ದಾರೆ.
ವಿಧಾನ ಪರಿಷತ್ಗೆ ತನ್ನದೇ ಆದ ಘನತೆ, ಗೌರವ ಇದೆ. ಇಲ್ಲಿ ಮಹತ್ವ ವಿಷಯಗಳು ಚರ್ಚೆ ಆಗುತ್ತವೆ. ಕೆಳಮನೆಯಲ್ಲಿ ಚರ್ಚಿತವಾದ ವಿಷಯಗಳು, ಅನುಮೋದನೆಯಾದ ವಿಧೇಯಕಗಳ ಮೇಲೆ ಮೇಲ್ಮನೆ ಅಂದರೆ ವಿಧಾನ ಪರಿಷತ್ತಿನಲ್ಲಿ ಸವಿವರವಾಗಿ ಚರ್ಚೆಯಾಗಿ ಅನುಮೋದನೆಗೊಳ್ಳುತ್ತವೆ. ಹೀಗಿರುವ ಸಮಯದಲ್ಲಿ ಸದನದ ಕಾರ್ಯಕಲಾಪಗಳಿಗೆ ಯಾವುದೇ ಧಕ್ಕೆ ಬರದ ಹಾಗೆ ಎಲ್ಲಾ ಶಾಸಕರು ಸಹಕರಿಸಿ ಕೂಲಂಕುಶವಾಗಿ ವಿಷಯಗಳನ್ನು ಚರ್ಚಿಸಿ ನಾಡಿನ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡಿ, ಮೇಲ್ಮನೆಯ ಘನತೆಯನ್ನು ಹೆಚ್ಚಿಸುವ ರೀತಿಯಲ್ಲಿ ಕಲಾಪಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಅವರು ಹೇಳಿದ್ದಾರೆ.
ವಿಧಾನ ಮಂಡಲದ ಅಧಿವೇಶನವು ಆರಂಭದ ದಿನ ವಿಧಾನ ಮಂಡಲದ ಅಧಿವೇಶನದಲ್ಲಿ ಮೊದಲಿಗೆ ರಾಜ್ಯಪಾಲರು ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿರುವರು, ನಂತರ ವಿಧಾನ ಪರಿಷತ್ತಿನಲ್ಲಿ ಕಲಾಪಗಳು ಮುಂದುವರೆಯಲಿವೆ. ಮೊದಲ ದಿನ ಅಗಲಿದ ಗಣ್ಯರುಗಳಿಗೆ ಸಂತಾಪ ಸೂಚಕ ನಿರ್ಣಯವನ್ನು ಮಂಡಿಸಲಾಗುವುದು. ತದ ನಂತರ ರಾಜ್ಯಪಾಲರ ಭಾಷಣದ ಮೇಲೆ ವಿಸ್ತತ ಚರ್ಚೆ ನಡೆಸಿ, ವಂದನಾ ನಿರ್ಣಯವನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.