ಬೆಂಗಳೂರು: ಕೈಗಾರಿಕೆಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಅಗತ್ಯ ಕ್ರಮ ವಹಿಸುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ. ಮುರಗೇಶ್ ಆರ್. ನಿರಾಣಿ ತಿಳಿಸಿದರು.
ಮಂಗಳವಾರ ವಿಧಾನ ಪರಿಷತ್ತಿನ ಅಧಿವೇಶನದ ಕಲಾಪದ ವೇಳೆ ಪ್ರಶ್ನೋತ್ತರ ಅವಧಿಯಲ್ಲಿ ವಿಧಾನ ಪರಿಷತ್ತಿನ ಸದಸ್ಯರಾದ ಹೆಚ್.ಎಂ. ರಮೇಶ್ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಇಲ್ಲಿಯವರೆಗೆ ರಾಜ್ಯಾದ್ಯಂತ 188 ಕೈಗಾರಿಕಾ ಪ್ರದೇಶವನ್ನು ನಿರ್ಮಿಸಿರುತ್ತದೆ. ಮಂಡಳಿಯು ಕೈಗಾರಿಕಾ ಪ್ರದೇಶಗಳಲ್ಲಿ ಕಲ್ಪಿಸಲಾದ ಮೂಲಭೂತ ಸೌಕರ್ಯಗಳು ಸುಸ್ಥಿತಿಯಲ್ಲಿರುತ್ತದೆ.
ಹಳೆಯ ಕೈಗಾರಿಕಾ ಪ್ರದೇಶಗಳಲ್ಲಿ ಉದ್ಯಮಿಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಬೀದಿ ದೀಪ ಇತ್ಯಾದಿಗಳನ್ನು ಮೇಲ್ದರ್ಜೆಗೇರಿಸಿ ಕೈಗಾರಿಕಾ ಪ್ರದೇಶಗಳನ್ನು ಸುಸ್ಥಿತಿಯಲ್ಲಿಡಲು ರಾಜ್ಯ ಸರ್ಕಾರ ಕ್ಲಿಷ್ಟಕರ ಮೂಲಭೂತ ಸೌಕರ್ಯ ಯೋಜನೆಯಡಿಯಲ್ಲಿ ಉನ್ನತೀಕರಣಗೊಳಿಸುವ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕಳೆದ 10 ವರ್ಷಗಳಲ್ಲಿ ಸುಮಾರು 525.00 ಕೋಟಿ ರೂ.ಗಳ ಅನುದಾನವನ್ನು ಕೆ.ಐ.ಎ.ಡಿ.ಬಿ ಗೆ ಬಿಡುಗಡೆ ಮಾಡಲಾಗಿದೆ. ಅಲ್ಲದೆ ಹಳೆಯ ಕೈಗಾರಿಕಾ ಪ್ರದೇಶಗಳನ್ನು ಸ್ಥಳೀಯ ಸಂಸ್ಥೆಗಳು ಹಾಗೂ ಕೈಗಾರಿಕಾ ಸಂಘಗಳಿಗೆ ಕೈಗಾರಿಕಾ ಪ್ರದೇಶದ ನಿರ್ವಹಣೆಗಾಗಿ ಹಸ್ತಾಂತರಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ತಿಳಿಸಿದರು.
ಜಿ.ಎಸ್.ಟಿ.ಯನ್ನು ಕೇಂದ್ರ ಸರ್ಕಾರವು ದಿನಾಂಕ: 01-07-2017ರಿಂದ ಜಾರಿಗೆ ತಂದಿದೆ. ಜಿ.ಎಸ್.ಟಿ.ಯನ್ನು ಜಾರಿಗೆ ತಂದ ನಂತರ ಕೆಲವು ತಾಂತ್ರಿಕ ಹಾಗೂ ತಂತ್ರಾಂಶ ತೊಂದರೆಗಳು ಮತ್ತು ಅರ್ಜಿಯನ್ನು ತುಂಬುವ ಕುರಿತು ಗೊಂದಲಗಳಿದ್ದು, ಈಗ ನಿವಾರಣೆ ಆಗಿರುತ್ತದೆ. ಪರೋಕ್ಷ ತೆರಿಗೆಗಳನ್ನು ಹಾಗೂ ರಾಜ್ಯದ ತೆರಿಗೆಗಳನ್ನು ಒಗ್ಗೂಡಿಸಿ ಕೈಗಾರಿಕೆಗಳಿಗೆ ಒಂದೇ ತೆರಿಗೆ ಅಂದರೆ ಜಿ.ಎಸ್.ಟಿ ಯನ್ನು ವಿಧಿಸುತ್ತಿರುವುದರಿಂದ ಇದು ಕೈಗಾರಿಕೆಗಳಿಗೆ ಅನುಕೂಲವಾಗಿದೆ.
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಇನ್ವೆಸ್ಟ್ ಕರ್ನಾಟಕ 2022ನ್ನು 2022 ರ ನವೆಂಬರ್ 2 ರಿಂದ4 ವರೆಗೆ ಬೆಂಗಳೂರಿನ ಅರಮನೆ ಆವರಣದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ. ಏಪ್ರಿಲ್-ಸೆಪ್ಟೆಂಬರ್ 2021 ಅವಧಿಯಲ್ಲಿ ಭಾರತದ ಒಟ್ಟು ವಿದೇಶಿ ನೇರ ಹೂಡಿಕೆಯ (ಎಫ್.ಡಿ.ಐ) ಹರಿವಿನ ಪ್ರಮಾಣದಲ್ಲಿ ಕರ್ನಾಟಕವು ರೂ. 1,02,866 ಕೋಟಿ ಅಂದರೆ ಶೇಕಡ 46 ರಷ್ಟು ಆಕರ್ಷಿಸಿ ಅಗ್ರಸ್ಥಾನದಲ್ಲಿದೆ. ಕೋವಿಡ್ – 19 ಸಾಂಕ್ರಾಮಿಕ ಸಮಯದಲ್ಲಿ ಅತೀ ಹೆಚ್ಚು ಎಫ್.ಡಿ.ಐ ಪಡೆದ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯ ಸೇರಿದೆ. ರಾಜ್ಯದ ಕೈಗಾರಿಕಾ ಅಭಿವೃದ್ಧಿಗೆ ಹಾಗೂ ವಿದೇಶಿ ಬಂಡವಾಳ ಆಕರ್ಷಣೆ ಮಾಡಲು ಕೈಗಾರಿಕಾ ನೀತಿ 2020 – 25 ನ್ನು ಜಾರಿಗೆ ತರಲಾಗಿದೆ. ರೂ 500 ಕೋಟಿಗಿಂತ ಹೆಚ್ಚಿಗೆ ಬಂಡವಾಳ ಹೂಡುವ ದೇಶೀಯ, ವಿದೇಶಿ ಕೈಗಾರಿಕೆಗಳಿಗೆ ವಿಶೇಷ ಉತ್ತೇಜನ ನೀಡಲು ಕೈಗಾರಿಕಾ ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಕೈಗಾರಿಕೆಗಳ ಸ್ಥಾಪನೆಗೆ ಕೈಗಾರಿಕೋದ್ಯಮಿಗಳಿಂದ ಜಮೀನು ಬೇಡಿಕೆ ಇರುವ ಕುರಿತು ಸಂಬಂಧಪಟ್ಟ ಜಿಲ್ಲೆಯ ಜಂಟಿ ನಿರ್ದೇಶಕರು, ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಕಾರ್ಯಪಾಲಕ ಅಭಿಯಂತರರು, ಕೆ.ಐ.ಎ.ಡಿ.ಬಿ ಇವರುಗಳು ಸ್ಥಳ ಪರಿಶೀಲನೆ ನಡೆಸಿ ಶಿಫಾರಸ್ಸು ಮಾಡುತ್ತಿದ್ದು, ಅದರಂತೆ ಪ್ರಮುಖ ಉಪ ವಿಭಾಗೀಯ ಕೇಂದ್ರ ಹಾಗೂ ಮುಖ್ಯ ತಾಲ್ಲೂಕುಗಳಲ್ಲಿ ಕೈಗಾರಿಕಾ ಪ್ರದೇಶಗಳನ್ನು ಕೆ.ಐ.ಎ.ಡಿ.ಬಿ.ಯು ಸ್ಥಾಪಿಸುತ್ತಿದೆ ಎಂದು ತಿಳಿಸಿದರು.