ಬೆಂಗಳೂರು: ವೃತ್ತಿರಂಗಭೂಮಿಯ ಹಿರಿಯ ಕಲಾವಿದ ಏಣಗಿ ಬಾಳಪ್ಪ ಅವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿ ಗ್ರಾಮದ ತಮ್ಮ ನಿವಾಸದಲ್ಲಿ ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಅವರಿಗೆ 103 ವರ್ಷ ವಯಸ್ಸಾಗಿತ್ತು. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಏಣಗಿ ಗ್ರಾಮದಲ್ಲಿ ಬಾಳಮ್ಮ ಹಾಗೂ ಕರಿಬಸಪ್ಪನವರ ಪುತ್ರನಾಗಿ 1914ರಲ್ಲಿ ಜನಿಸಿದ್ದರು. ಅವರದ್ದು ಒಕ್ಕಲುತನದ ಕುಟುಂಬವಾಗಿತ್ತು. ಅವತ್ತಿನ ಕಾಲದಲ್ಲಿ ಹಳ್ಳಿಗೆ ಬರುತ್ತಿದ್ದ ಬಯಲಾಟ, ದೊಡ್ಡಾಟ ಅವರನ್ನು ಸೆಳೆಯಿತು. ಅದರಲ್ಲೂ ಲವ-ಕುಶ ನಾಟಕ ನೋಡಿದ ಮೇಲೆ ಅವರ ಮನಸ್ಸೆಲ್ಲಾ ನಾಟಕ ರಂಗದತ್ತಲೇ ಸೆಳೆದಿತ್ತು. ಹೀಗಾಗಿ ತಮ್ಮ 10ನೇ ವಯಸ್ಸಿಗೆಲ್ಲ ಬಣ್ಣ ಹಚ್ಚಿ ನಾಟಕ ಮಾಡಲು ಆರಂಭಿಸಿದರು. ಮುಂದೆ ಚಿಕ್ಕೋಡಿ ಸಿದ್ಧಲಿಂಗಸ್ವಾಮಿಗಳ ಕಂಪೆನಿಯ ಮಹಾನಂಜನಾಟಕದಲ್ಲಿ ಬಾಲನಟನಾಗಿ ಪ್ರಹ್ಲಾದನಾಗಿ ಮಾಡಿದ ಪಾತ್ರ ಅವರನ್ನು ರಂಗಭೂಮಿಯತ್ತ ಸೆಳೆಯಿತು ಅದರಲ್ಲೇ ಮುಂದುವರೆಯಿತು.
ಮಹಿಳಾ ವೇಷದಲ್ಲೂ ಗಮನಸೆಳೆದ ಅವರು ಮುಂದೆ ಹಲವು ನಾಟಕಗಳಲ್ಲಿ ತಮ್ಮ ಕಲಾ ಪ್ರತಿಭೆಯನ್ನು ಅನಾವರಣಗೊಳಿಸಿದರು. ನೂರಾರು ನಾಟಕಗಳಲ್ಲಿ ಪಾತ್ರ ಮಾಡಿದರು. ಸಿನಿಮಾದಲ್ಲಿಯೂ ಅಭಿನಯಿಸಿದರು. ಶಿವರಾಜ್ಕುಮಾರ್ ಅಭಿನಯದ ಚಿತ್ರ ಜನುಮದ ಜೋಡಿಯಲ್ಲಿನ ಅಭಿನಯ ಅವರಿಗೆ ಇನ್ನಷ್ಟು ಹೆಸರನ್ನು ತಂದುಕೊಟ್ಟಿತು. ಇವರ ಮಗ ಏಣಗಿ ಬಾಳಪ್ಪ ಕೂಡ ರಂಗಭೂಮಿ, ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಇವರು ಅನುಭವಿ ರಂಗಕರ್ಮಿ, ನಟ, ನಿರ್ದೇಶಕರೂ ಆಗಿದ್ದರು. ಆದರೆ ಅವರು ಇತ್ತೀಚೆಗಷ್ಟೆ ನಿಧನರಾಗಿದ್ದರು.
ಕರ್ನಾಟಕ ರಾಜ್ಯ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಪರಿಷತ್ ಪ್ರಶಸ್ತಿ, ಕೇಂದ್ರ ಸರಕಾರದ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯ ಸರಕಾರದ ಅತ್ಯಂತ ಪ್ರತಿಷ್ಠಿತವಾದ ಗುಬ್ಬಿ ವೀರಣ್ಣ ಪ್ರಶಸ್ತಿ, ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಂದಿಂದ ಗೌರವ ಡಾಕ್ಟರೇಟ್ ಪದವಿ, ನಾಟ್ಯಭೂಷಣ, ನಾಟ್ಯಗಂಧರ್ವ ಮೊದಲಾದ ಗೌರವವನ್ನು ಪಡೆದುಕೊಂಡಿದ್ದರು.
ಇತ್ತೀಚೆಗೆ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಅವರ ನಿಧನದಿಂದಾಗಿ ರಂಗಭೂಮಿ ಹಿರಿಯ ಕಲಾವಿದನನ್ನು ಕಳೆದುಕೊಂಡಂತಾಗಿದೆ.