ಕೊಳ್ಳೇಗಾಲ: ಮನೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡ ಹಿನ್ನೆಲೆ ರಾತ್ರಿ ಹಚ್ಚಿಟ್ಟಿದ್ದ ಮೊಂಬತ್ತಿ ಆ ಮನೆಯ ವೃದ್ಧನ ಪ್ರಾಣವನ್ನೇ ತೆಗೆದಿದೆ.ರಾತ್ರಿ 11.30ರಲ್ಲಿ ಮಲಗಿರುವಾಗ ಆಕಸ್ಮಿಕವಾಗಿ ಮೊಂಬತ್ತಿ ಬೆಂಕಿ ಚಾಪೆಗೆ ತಾಗಿ ಹೊತ್ತಿ ಉರಿದಿದೆ.
ಇಂತಹ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಹರಳೆ ಗ್ರಾಮದಲ್ಲಿ ಸಂಭವಿಸಿದೆ.ಗ್ರಾಮದ ನಿವಾಸಿ ಸಿದ್ದನಾಯಕ(65) ಮೃತ ದುರ್ದೈವಿ.
ಶುಕ್ರವಾರ ರಾತ್ರಿ ಮನೆಯಲ್ಲಿ ರಾತ್ರಿ ವಿದ್ಯುತ್ ಸಂಪರ್ಕವಿಲ್ಲದ ಹಿನ್ನೆಲೆಯಲ್ಲಿ ಮೊಂಬತ್ತಿ ಹಚ್ಚಿದ್ದರು. ಈ ವೇಳೆ ವೃದ್ಧ ಚೀರಾಡುತ್ತಾ ಕೂಗಿದ ಶಬ್ದ ಕೇಳಿದ ಸಂಬಂಧಿ ಮಾದೇಶ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿ ಪಟ್ಟಣದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಸ್ಥಳಾಂತರಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದರು.
ಮರುದಿನ ಚಿಕಿತ್ಸೆಗೆ ವೃದ್ಧ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.