ಬೆಂಗಳೂರು: ತಂದೆ ಹಾಗು ಮಗ ಕತೆಗಳ ಮುಖೇನ ಮಾತಾಡಿರುವಂತಹ ಸಂಭಾಷಣೆಗಳು ಇಲ್ಲಿವೆ. ಅದು ತಂದೆ ಮಗನ ವಿಚಾರವಂತಿಕೆಯನ್ನು ತೋರಿಸುತ್ತದೆ ಎಂದು ಹಿರಿಯ ಸಾಹಿತಿ ಜೋಗಿ ಹೇಳಿದರು.
ಬೆಂಗಳೂರಿನ ಸ್ನೇಹ ಬುಕ್ ಹೌಸ್ ವತಿಯಿಂದ ಭಾನುವಾರದಂದು ಹಮ್ಮಿಕೊಂಡಿದ್ದ ಲೇಖಕ ಪ್ರಮೋದ ಮೋಹನ ಹೆಗಡೆ ಅವರ ʼಮೈಸೂರ್ ಪಾಕ್ ಹುಡುಗʼ ಹಾಗು ಲೇಖಕ ಮೋಹನ ಭಾಸ್ಕರ ಹೆಗಡೆ ಅವರ ‘ಪ್ರಭಾರಿ’ ಕಥಾ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ತಂದೆ ಮಗನ ವಿಚಾರವನ್ನು ಒಬ್ಬರನೊಬ್ಬರಿಗೆ ತಿಳಿಸುವ ಕೆಲಸವನ್ನು ಈ ಕೃತಿಯು ಮಾಡುತ್ತದೆ. ಇಲ್ಲಿನ ಕತೆಗಳು ಸಹಾನೂಭೂತಿಯಿಂದ ಹುಟ್ಟಿದವು ಎಂದರು. ವ್ಯಕ್ತಿ ತನ್ನ ಬದುಕಿನ ದುರಂತವನ್ನು ಕಾಣುವುದು ತನ್ನ ಜೊತೆಗಿದ್ದ ವ್ಯಕ್ತಿಯ ಸಾಧನೆಯನ್ನು ನೋಡಿದಾಗ. ಕೇವಲ ಆತ ಬೆಳೆಯುದಲ್ಲದೇ ಆತನ ಜೊತೆಗಾರನನ್ನು ಬೆಳೆಸುವುದು ಮುಖ್ಯ. ಇಲ್ಲಿ ತಂದೆ ಮಗನ ವಿಚಾರದಲ್ಲಿ ಅಂತಹ ಸಾಧನೆಯನ್ನು ಕಾಣಬಹುದು ಎಂದರು.
ಲೇಖಕಿ ಡಾ. ವಸುಂಧರಾ ಭೂಪತಿ ಅವರು ಮಾತನಾಡಿ, ಸಾಹಿತ್ಯದ ಒಂದೇ ಪ್ರಕಾರವನ್ನು ತಂದೆ ಮಗ ಇಬ್ಬರು ಬರೆದಿರುವುದು ವಿಶಿಷ್ಟ. `ಪ್ರಬಾರಿ’ ಕತಾಸಂಕಲನವು ಪ್ರತಿಯೊಂದು ವಿಚಾರಗಳನ್ನು ವಿವರಿಸುತ್ತದೆ. ಎಲ್ಲಾ ರೀತಿಯ ವಿಚಾರಧಾರೆಗಳಿಗೆ ಇಲ್ಲಿ ಪ್ರಾಮುಖ್ಯತೆ ನೀಡಿದ್ದು, ಭಾಷೆ ಮತ್ತು ಭಾವನೆ ಇಲ್ಲಿ ಪ್ರಮುಖವೆನ್ನಿಸುತ್ತದೆ ಎಂದರು.
ವಿಶೇಷ ಆಯುಕ್ತರು ಬಿಬಿಎಂಪಿ ಬೆಂಗಳೂರು ಡಾ. ಹರೀಶ ಕುಮಾರ್ ಕೆ ಮಾತನಾಡಿ, ಸಾಹಿತ್ಯದ ಕೃಷಿಯನ್ನು ನಾವು ಬೇರೆ ಬೇರೆ ರೀತಿಯಲ್ಲಿ ಮಾಡುತ್ತೇವೆ. ಆದರೆ ಒಂದೇ ಮನಸ್ಕರನ್ನು ಒಂದೇ ತಟ್ಟೆಯಲ್ಲಿ ಹಾಕಿ ಬೆಳೆಸುವುದು ಅಂದರೆ ಸುಲಭವಲ್ಲ. ಅಂತಹ ಕೆಲಸವನ್ನು ಗೋಪಾಲಕೃಷ್ಣ ಕುಂಟಿನಿ ಮಾಡುತ್ತಿದ್ದಾರೆ. ಇಂತಹ ಹಿರಿಯ ಸಾಹಿತಿಗಳ ಪ್ರೇರಣೆ ಯುವಕರಿಗೆ ಬಹು ಮುಖ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೆಲ್ಕೋ ಸಂಸ್ಥಾಪಕ, ರಾಮೋನ್ ಮ್ಯಾಗಸ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಸೌರ ವಿಜ್ಞಾನಿ ಡಾ. ಹರೀಶ ಹಂದೆ ವಹಿಸಿದರು. ಪತ್ರಕರ್ತ ಹಾಗೂ ಕೃಷಿಕ ಗೋಪಾಲಕೃಷ್ಣ ಕುಂಟಿನಿ, ಕೃತಿಯ ಕರ್ತೃಗಳಾದ ಪ್ರಮೋದ ಮೋಹನ ಹೆಗಡೆ ಹಾಗು ಮೋಹನ ಭಾಸ್ಕರ ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪತ್ರಕರ್ತೆ, ಕತತೆಗಾರ್ತಿ ಪ್ರಿಯಾ ಕೆರ್ವಾಶೇ ನಿರೂಪಿಸಿದರು. ಸ್ವಾಗತವನ್ನು ಸ್ನೇಹ ಬುಕ್ ಹೌಸ್ ಸಂಚಾಲಕ ಕೆ.ಬಿ.ಪರಶಿವಪ್ಪ ನೆರವೇರಿಸಿದರು