ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್ ಅವರ ಸಹಿ ದುರ್ಬಳಕೆ ಮಾಡಿಕೊಂಡ ಕಿಡಿಗೇಡಿಗಳು ನ.30ರಿಂದ ಆರಂಭವಾಗಲಿರುವ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಸುಳ್ಳು ಪತ್ರಿಕಾ ಪ್ರಕಟಣೆ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಇದರಿಂದ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಆತಂಕ ಎದುರಾಗಿದ್ದುಮ, ತಕ್ಷಣ ಎಚ್ಚೆತ್ತ ಬೆಂವಿವಿ ಪರೀಕ್ಷಾ ವಿಭಾಗ ಸುತ್ತೋಲೆ ಹೊರಡಿಸಿದ್ದು, ಯಾವುದೇ ಪರೀಕ್ಷೆಗಳನ್ನು ಮುಂದೂಡಿಲ್ಲ. ಈ ಹಿಂದೆಯೇ ನಿಗದಿಯಾಗಿರುವ ವೇಳಾಪಟ್ಟಿಯಂತೆಯೇ ನಡೆಯಲಿದೆ ಎಂದು ಬೆಂವಿವಿ ಮೌಲ್ಯಮಾಪನ ಕುಲಸಚಿವ ದೇವರಾಜ್ ಸ್ಪಷ್ಟನೆ ನೀಡಿದ್ದಾರೆ.
ಆದರೆ, ಕುಲಪತಿ ಸಹಿ ನಕಲು ಮಾಡಿರುವ ಕುರಿತು ಬೇಸರ ವ್ಯಕ್ತಪಡಿಸಿರುವ ಕುಲಪತಿ ವೇಣುಗೋಪಾಲ್ ದೂರು ನೀಡುವ ಬಗ್ಗೆ ಆಲೋಚಿಸಿರುವುದಾಗಿ ತಿಳಿಸಿದರು. ಸದ್ಯಕ್ಕೆ ಮಕ್ಕಳು ಆತಂಕವಿಲ್ಲದೆ, ಪರೀಕ್ಷೆಗೆ ಹಾಜರಾಗುವಂತೆ ಮನವಿ ಮಾಡಿದ್ದಾರೆ.