ಬೆಂಗಳೂರು : ಸಾವು ಯಾರಿಗೆ ಹೇಗೆ ಯಾವ ರೂಪದಲ್ಲಿ ಬರುತ್ತದೆಯೋ ಗೊತ್ತಿಲ್ಲ ಎನ್ನುವುದಕ್ಕೆ ಈ ಯುವತಿಯ ಸಾವು ಸಾಕ್ಷಿಯಾಗಿದೆ.
ಇಂದು ಹುಟ್ಟು ಹಬ್ಬದ ಸಂತಸದಲ್ಲಿದ್ದ ಯುವತಿಯೋರ್ವಳು ರಸ್ತೆ ಅಪಘಾತದಲ್ಲಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿರುವ ಹೃದಯವಿದ್ರಾವಕ ಘಟನೆ ಇಂದು ಬೆಳಗ್ಗೆ ಹೆಬ್ಬಾಳದಲ್ಲಿ ನಡೆದಿದೆ.
ಇಂದಿಗೆ 18 ತುಂಬಿ 19 ನೇ ವರ್ಷಕ್ಕೆ ಕಾಲಿಟ್ಟದ ಈಕೆಯ ಹೆಸರು ಮಹಶ್ರೀ. ಎಲ್ಲಾ ಚೆನ್ನಾಗಿದ್ದಿದ್ರೆ ಸ್ನೇಹಿತರ ಜೊತೆ ಬರ್ಥ್ ಡೇ ಸೆಲೆಬ್ರೆಷನ್ ಮಾಡಿಕೊಳ್ಳಬೇಕಿದ್ದ ಈ ಯುವತಿ ಬಾಳಲ್ಲಿ ವಿಧಿಯಾಟವೇ ಬೇರೆಯಾಗಿತ್ತು. ಸ್ನೇಹಿತನ ಜೊತೆ ಬೈಕ್ ನಲ್ಲಿ ತೆರಳುವಾಗ ಬೆನ್ನತ್ತಿ ಬಂದ ಜವರಾಯ ಇವಳನ್ನು ಬಿಡದೇ ಕರೆದುಕೊಂಡು ಹೋಗಿದ್ದಾನೆ.
ಸ್ನೇಹಿತನೊಂದಿಗೆ ಬೈಕಿನಲ್ಲಿ ಹೋಗುವಾಗ ಆಯತಪ್ಪಿ ಬಿದ್ದ ಪರಿಣಾಮ ಹಿಂಬದಿಯಿಂದ ಬರುತ್ತಿದ್ದ ಟ್ಯಾಂಕರ್ ಆಕೆಯ ಮೇಲೆ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಭದ್ರಪ್ಪ ಲೇಔಟ್ ನಿವಾಸಿಯಾಗಿರುವ ಮಹಶ್ರೀ ಮಲ್ಲೇಶ್ವರಂ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಜೊತೆಗೆ ಟೆಕ್ಸ್ ಟೈಲ್ಸ್ ಅಂಗಡಿಯೊಂದರಲ್ಲಿ ಪಾರ್ಟ್ ಟೈಮ್ ಕೆಲಸ ಮಾಡಿಕೊಂಡಿದ್ದಳು. ಇಂದು ಬರ್ತ್ ಡೇ ಇದ್ದಿದರಿಂದ ಮನೆಯಲ್ಲಿರುವಂತೆ ಕುಟುಂಬಸ್ಥರು ಹೇಳಿದ್ದರು. ಪೋಷಕರು ಮಾತು ಕೇಳದೆ ಕೆಲಸಕ್ಕೆ ಹೋಗುತ್ತೇನೆ ಎಂದು ಹಠ ಮಾಡಿ ಹೊರಟವಳು ಮಸಣ ಸೇರಿದ್ದು ಮಾತ್ರ ವಿಧಿಯಾಟವೇ ಸರಿ.
ಬಸ್ ಸ್ಟಾಂಡ್ ನಿಂದ ಸ್ನೇಹಿತನೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಭದ್ರಪ್ಪ ಲೇಔಟ್ ಬಳಿಯ ಫ್ಲೈ ಓವರ್ ಮೇಲೆ ಈ ದುರ್ಘಟನೆ ಸಂಭವಿಸಿದೆ.