ಬೆಂಗಳೂರು : ರಾಜ್ಯದಲ್ಲಿ ಆರಂಭವಾಗಿರುವ ಆಜಾನ್, ಭಜನೆ, ಹಲಾಲ್, ಜಟ್ಕಾ ಕಟ್ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಕಿಡಿ ಕಾರಿರುವ ಶಾಸಕ ಪ್ರಿಯಾಂಕ್ ಖರ್ಗೆ, ಸರ್ಕಾರ ಸತ್ತು ಹೋಗಿದೆ. ಬಜರಂಗದಳದವರೇ ಸಿಎಂ ಎಂಬಂತೆ ವರ್ತಿಸುತ್ತಿದ್ದಾರೆ. ವಿವಾದ ನಡೆಯುತ್ತಿದರೂ ನಿಯಂತ್ರಿಸುವ ಧಮ್ಮು ಸರ್ಕಾರಕ್ಕಿಲ್ಲದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ಸಿಎಂ ಇದ್ದಾರ ಇಲ್ಲವೋ ಗೊತ್ತಾಗುತ್ತಿಲ್ಲ. ದಿನಕ್ಕೊಂದು ವಿವಾದಗಳನ್ನು ಸೃಷ್ಟಿಸಿ ಬಜರಂಗದಳದವರು ತಾವೇ ಸಿಎಂ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಹಿಜಾಬ್ ವಿವಾದಿಂದ ಹಿಡಿದು ಈವರೆಗೆ ದಿನಕ್ಕೊಂದು ಬೆಳವಣಿಗಳು ನಡೆಯುತ್ತಿದೆ. ಧಮ್ಮಿಲ್ಲದ ಸರ್ಕಾರ ಕೆಲಸಕ್ಕೆ ಬಾರದ ವಿಚಾರಗಳನ್ನು ಇಟ್ಟು ವಿವಾದಗಳನ್ನು ಮಾಡುತ್ತಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಆರ್ ಎಸ್ ಎಸ್ ಕೈಗೊಂಬೆಯಾಗಿದ್ದಾರೆ. ಮೂಕ ಬಸವ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹಿಜಾಬ್ ವಿವಾದ ಸೃಷ್ಟಿಯಾಗಿ ಅದು ಸುಪ್ರೀಂ ಕೋರ್ಟ್ ವರೆಗೆ ಹೋಯಿತು ಎಂದರೆ ಏನರ್ಥ? ಸರ್ಕಾರಕ್ಕೆ ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗಿಲ್ಲ ಎಂದರ್ಥ. ಪೆಟ್ರೋಲ್, ಡೀಸೆಲ್ ದರ, ಬೆಲೆ ಏರಿಕೆಯಿಂದಾಗಿ ಜನರು ತತ್ತರಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರದ ಯಾರೊಬ್ಬರೂ ಮಾತನಾಡುತ್ತಿಲ್ಲ. ಅಭಿವೃದ್ಧಿ ಕೆಲಸ ಕಾರ್ಯ, ಜನರ ಸಮಸ್ಯೆಗಳನ್ನು ಬಿಟ್ಟು ವಿವಾದಗಳನ್ನು ಮಾಡುತ್ತಾ ಕುಳಿತಿದ್ದಾರೆ. ಸಿಎಂ ಸರ್ಕಾರ ನಡೆಸುವುದನ್ನು ಬಿಟ್ಟು ಬಜರಂಗದಳ, ಆರ್ ಎಸ್ ಎಸ್ ನವರಿಗೆ ಅಧಿಕಾರ ಬಿಟ್ಟುಕೊಟ್ಟುಬಿಡಲಿ ಎಂದು ಗುಡುಗಿದ್ದಾರೆ.