ಗುಂಡ್ಲುಪೇಟೆ: ಕಾಡಿನಿಂದ ನಾಡಿಗೆ ಬಂದ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ಅರಣ್ಯ ಇಲಾಖೆಯ ಜೀಪು ಜಖಂಗೊಂಡಿದ್ದು, ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬಂಡೀಪುರದ ಓಂಕಾರ್ ಅರಣ್ಯ ವಲಯದಲ್ಲಿ ನಡೆದಿದೆ.
ಬೇಸಿಗೆ ಬರುತ್ತಿದ್ದಂತೆಯೇ ಆಹಾರ ಅರಸಿ ಕಾಡಾನೆಗಳು ನಾಡಿಗೆ ಬಂದು ರೈತರ ಜಮೀನಿಗೆ ನುಗ್ಗುವುದು ಸಾಮಾನ್ಯವಾಗಿದೆ. ಅರಣ್ಯದಂಚಿನಲ್ಲಿ ರೈತರು ಬೆಳೆದ ಬೆಳೆಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳಲು ಬರುತ್ತಿದ್ದು, ಅದರಲ್ಲೂ ಬಂಡೀಪುರದ ಓಂಕಾರ್ ಅರಣ್ಯ ವಲಯದಲ್ಲಿ ಆಗಾಗ್ಗೆ ರೈತರ ಜಮೀನಿನಲ್ಲಿ ಕಾಣಿಸಿಕೊಳ್ಳುತ್ತಿವೆ. ಕೆಲವು ರೈತರು ಇವುಗಳ ಉಪಟಳ ತಡೆಯುವ ಸಲುವಾಗಿ ಜಮೀನಿನಲ್ಲಿ ಅಕ್ರಮ ವಿದ್ಯುತ್ ಹಾಯಿಸಿ ಕಾಡಾನೆಗಳ ಪ್ರಾಣಕ್ಕೂ ಕೆಲವರು ಕುತ್ತು ತರುತ್ತಿದ್ದಾರೆ.
ಈ ನಡುವೆ ಕೆಲವು ಕಾಡಾನೆಗಳು ಉಪಟಳ ನೀಡುತ್ತಿದ್ದು, ಅವುಗಳನ್ನು ಕಾಡಿಗೆ ಅಟ್ಟಲು ಬರುವ ಸಿಬ್ಬಂದಿಗಳ ಮೇಲೆಯೇ ದಾಳಿ ಮಾಡುತ್ತಿವೆ. ಇದಕ್ಕೆ ಉದಾಹರಣೆ ಎಂಬಂತೆ ಓಂಕಾರ್ ಅರಣ್ಯ ವಲಯದ ಕುರುಬರಹುಂಡಿಯಲ್ಲಿ ಘಟನೆ ನಡೆದಿದೆ. ಕಾಡಾನೆ ದಾಳಿಯಿಂದ ಅದೃಷ್ಟ ವಶಾತ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದು ಇಲಾಖೆಯ ಜೀಪು ಜಖಂಗೊಂಡಿದೆ.
ಇಷ್ಟಕ್ಕೂ ಆಗಿದ್ದೇನು ಎಂಬುದನ್ನು ನೋಡುವುದಾದರೆ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯ ವ್ಯಾಪ್ತಿಗೆ ಬರುವ ಕುರುಬರಹುಂಡಿ ಗ್ರಾಮಕ್ಕೆ ಕಾಡಾನೆಗಳು ಲಗ್ಗೆಯಿಟ್ಟಿದ್ದು, ಅಲ್ಲಿನ ರೈತರ ಜಮೀನಿನಲ್ಲಿ ಬೀಡು ಬಿಟ್ಟು ಫಸಲನ್ನು ನಾಶಮಾಡುತ್ತಿದ್ದವು.
ಹೀಗಾಗಿ ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಸಿಬ್ಬಂದಿ ರೈತರ ಜಮೀನಿನಲ್ಲಿ ಬೀಡುಬಿಟ್ಟಿದ್ದ ಕಾಡಾನೆಯನ್ನು ಓಡಿಸಲು ಶುಕ್ರವಾರ ಬೆಳಗ್ಗೆ 6.30ರ ಸಮಯದಲ್ಲಿ ಜೀಪಿನಲ್ಲಿ ಬಂದಿದ್ದಾರೆ.
ಈ ವೇಳೆ ಜೀಪಿನ ಮೇಲೆ ಏಕಾಏಕಿ ಕಾಡಾನೆಯೊಂದು ಎರಗಿ ಜೀಪಿನ ಮುಂಭಾಗ ದಂತದಿಂದ ತಿವಿದಿದೆ. ಈ ವೇಳೆ ಜೀಪಿನಲ್ಲಿದ್ದ ಡಿಆರ್ ಎಫ್ ಓ ಅಮರ್ ಹಾಗೂ ಸಿಬ್ಬಂದಿ ಮಾದಪ್ಪ, ಶಿವು, ರಾಜಣ್ಣ, ಅನಿಲ್ ಮೊದಲಾದವರು ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಕಾಡಾನೆ ಅಷ್ಟಕ್ಕೆ ಸುಮ್ಮನಾಗದೆ ಜೀಪನ್ನು ನೆಲಕ್ಕುರುಳಿಸಿದ್ದು, ಪರಿಣಾಮ ಜೀಪು ಸಂಪೂರ್ಣ ಜಖಂಗೊಂಡಿದೆ.
ಈ ಕುರಿತಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ಕಳೆದೊಂದು ವಾರದಿಂದ ಕುರುಬರಹುಂಡಿ ಸೇರಿದಂತೆ ಕಾಡಂಚಿನ ಗ್ರಾಮಕ್ಕೆ ಕಾಡಾನೆಗಳು ಲಗ್ಗೆಯಿಡುತ್ತಿದ್ದು, ರೈತರು ಬೆಳೆದ ಫಸಲನ್ನು ತಿಂದು ತುಳಿದು ನಾಶಮಾಡುತ್ತಿವೆ. ಕೊರೊನಾ ಸಂಕಷ್ಟದಲ್ಲಿಯೂ ಸಾಲ ಮಾಡಿ ರೈತರು ಬಾಳೆ, ಟೊಮ್ಯಟೋ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. ಆದರೆ ಫಸಲು ಬರುವ ವೇಳೆಗೆ ಕಾಡಾನೆಗಳು ದಾಳಿ ಮಾಡಿ ಬೆಳೆ ಮಾತ್ರವಲ್ಲದೆ ಶೆಡ್, ಬೇಲಿಯನ್ನು ನಾಶ ಮಾಡುತ್ತಿವೆ ಎಂದು ರೈತರು ದೂರಿದ್ದಾರೆ.