ಬೆಂಗಳೂರು, ಮಾ.30 : ಪಿಎಸ್ಐ ನೇಮಕಾತಿಯಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟ ಪಡಿಸಿದ್ದಾರೆ. ವಿಧಾನಪರಿಷತ್ನ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಅರವಿಂದ ಕುಮಾರ್ಅರಳಿ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂಥ್ ಬಳಕೆ ಮಾಡಿ ಅಭ್ಯಾಸ ನಡೆಸುತ್ತಿದ್ದ ಮಾಹಿತಿ ಆಧರಿಸಿ ಬೆಳಗಾವಿ, ಕಲಬುರಗಿ ಸೇರಿ ಕೆಲವು ಕಡೆ ಹೋಟೆಲ್ ಮೇಲೆ ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆಯಲಾಗಿದೆ.
ಪರೀಕ್ಷಾ ಕೊಠಡಿಯಲ್ಲಿ ಬ್ಲೂಟೂಥ್ ಬಳಕೆಯಾಗಿಲ್ಲ. ಪರೀಕ್ಷಾ ಕೇಂದ್ರದ ಸುತ್ತ ಎರಡು ಹಂತದ ಬಿಗಿ ಕಾವಲು ಹಾಕಲಾಗಿತ್ತು ಎಂದು ಸ್ಪಷ್ಟ ಪಡಿಸಿದರು. ಹೈದರಾಬಾದ್ ಕರ್ನಾಟಕ ಭಾಗಕ್ಕೆ ಮೀಸಲಾತಿ ಸಿಕ್ಕಿಲ್ಲ ಎಂದು ಆ ಭಾಗದ ಸದಸ್ಯರು ಆಕ್ಷೇಪಿಸಿದಾಗ ಅದನ್ನು ಪರಿಶೀಲಿಸಲು ಮುಖ್ಯಮಂತ್ರಿಯವರು ನೇಮಕಾತಿ ಪಟ್ಟಿಗೆ ತಡೆ ನೀಡಿದ್ದಾರೆ. ಅದನ್ನು ಹೊರತು ಪಡಿಸಿ ಯಾವುದೇ ಅವ್ಯವಹಾರ ನಡೆದಿಲ್ಲ.
ಅದಕ್ಕಾಗಿಯೂ ತಡೆ ನೀಡಿಲ್ಲ. ಕಲ್ಯಾಣ ಕರ್ನಾಟಕದ ಪಾಲು ಹಂಚಿಕೆಯಲ್ಲಿ ಅನ್ಯಾಯವಾಗಿರುವುದನ್ನು ಪರಿಶೀಲಿಸಿದ ಬಳಿಕ ನೇಮಕಾತಿ ಆದೇಶ ನೀಡಲಾಗುವುದು ಎಂದರು.
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ. ಹಣದ ವ್ಯವಹಾರವೂ ಇಲ್ಲ. ಪರೀಕ್ಷೆಯಲ್ಲಿ ನಕಲು ನಡೆದಿದೆ ಎಂಬುದು ಸತ್ಯಕ್ಕೆ ದೂರವಾಗಿದೆ. ಸದಸ್ಯರಿಗೆ ಕ್ಷೇತ್ರವಾರು ಫಲಿತಾಂಶ ಒದಗಿಸುತ್ತೇನೆ. ಒಂದೇ ಕ್ಷೇತ್ರದ ಹಾಗೂ ಒಂದೇ ಪರೀಕ್ಷಾ ಕೇಂದ್ರದ ಅಭ್ಯರ್ಥಿಗಳು ಹೆಚ್ಚಾಗಿ ಆಯ್ಕೆಯಾಗಿದ್ದಾರೆ ಎಂಬುದು ಸರಿಯಲ್ಲ ಎಂದರು.