ಬೆಂಗಳೂರು: ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿರುವ ನಾಳಿನ ಕರ್ನಾಟಕ ಬಂದ್ ಯಶಸ್ವಿಯಾಗಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬಂದ್ ಯಶಸ್ವಿಯಾಗಲ್ಲ ಎಂಬುದು ನಮಗೆ ಗೊತ್ತಿದೆ. ಕನ್ನಡ ಪರ ಸಂಘಟನೆಗಳೇ ಬಂದ್ ನಿಂದ ಹಿಂದೆ ಸರಿದಿವೆ. ಶಾಂತಿಯುತ ಪ್ರತಿಭಟನೆಗಳಿಗೆ ಅವಕಾಶವಿದೆ. ಆದರೆ ಬಂದ್ ಗೆ ಅವಕಾಶವಿಲ್ಲ ಎಂದರು.
ಕಳೆದ ಎರಡು ವರ್ಷಗಳಿಂದ ಕೋವಿಡ್ ನಿಂದಾಗಿ ಜನ ತತ್ತರಿಸಿದ್ದಾರೆ. ಬೀದಿಬದಿ ವ್ಯಾಪಾರಿಗಳಿಂದ ಹಿಡಿದು ಪ್ರತಿಯೊಂದು ಉದ್ಯಮಗಳು ಕೂಡ ಸಂಕಷ್ಟಕ್ಕೀಡಾಗಿವೆ. ಇಂತಹ ಸಂದರ್ಭ ಎದುರಿಸುತ್ತಿರುವಾಗ ಮತ್ತೆ ಬಂದ್ ಮಾಡುವುದರಿಂದ ಹಲವರಿಗೆ ಸಮಸ್ಯೆಯಾಗುತ್ತೆ, ಬೀದಿಬದಿ ವ್ಯಾಪಾರಸ್ಥರ ಹೊಟ್ಟೆ ಮೇಲೆ ಹೊಡೆಯುವ ಕ್ಕೆಲಸ ಮಾಡಬಾರದು. ಕನ್ನಡಪರ ಚಳುವಳಿಗಾರರು ಈ ಬಗ್ಗೆ ಗಮನ ಹರಿಸಬೇಕು. ಈಗಗಾಲೇ ಎಂಇಎಸ್ ಪುಂಡರ ವಿರುದ್ಧ ಕ್ರಮ ಕೈಗೊಂಡಿದ್ದೇವೆ.
ಕಿಡಿಗೇಡಿಗಳನ್ನು ಬಂಧಿಸಲಾಗಿದೆ. ನೆಲ ಜಲ ಭಾಷೆ ರಕ್ಷಣೆ ವಿಚಾರದಲ್ಲಿ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಆದರೆ ಕರ್ನಾಟಕ ಬಂದ್ ನಿಂದಾಗಿ ನಮ್ಮಲ್ಲಿನ ಜನತೆಗೆ ತೊಂದರೆಯಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ನಾಳೆ ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ಎಲ್ಲಾ ರೀತಿಯ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ಯಾರಿಗೂ ಯಾವುದೇ ರೀತಿ ಸಮಸ್ಯೆಯಾಗದಂತೆ ಎಚ್ಚರ ವಹಿಸಲಾಗುವುದು ಎಂದರು.