ಬೆಂಗಳೂರು: ರಾಜ್ಯದ ಮಲೆನಾಡು ಪ್ರದೇಶಗಳಲ್ಲಿ ಒಂದಷ್ಟು ಮಳೆಯಾಗುತ್ತಿದೆಯಾದರೂ ಮುಂಗಾರು ಆರಂಭದಲ್ಲಿ ಸುರಿದ ಮಳೆಯನ್ನು ನಂಬಿ ಕೃಷಿ ಮಾಡಿದ್ದ ಬಯಲು ಸೀಮೆಯ ರೈತರು ಇದೀಗ ಪರದಾಡುವಂತಾಗಿದೆ. ಮಳೆ ಕೈಕೊಟ್ಟ ಕಾರಣದಿಂದ ಜೋಳ ಸೇರಿದಂತೆ ಕೆಲವು ಬೆಳೆಗಳು ಒಣಗುತ್ತಿವೆ. ಕಳೆದ ಎರಡು ತಿಂಗಳಿನಲ್ಲಿ ರಾಜ್ಯದ ಹಲವು ಪ್ರದೇಶಗಳಲ್ಲಿ ಮಳೆ ಕೊರತೆ ತೀವ್ರವಾಗಿದ್ದು, ಇನ್ನೊಂದು ವಾರ ಕಾಲ ಉತ್ತಮ ಮಳೆಯಾಗುವ ಲಕ್ಷಣಗಳಿಲ್ಲ ಎಂದು ಹವಾಮಾನ ತಜ್ಞ ವಿ.ಎಸ್.ಪ್ರಕಾಶ್ ತಿಳಿಸಿದ್ದು, ಮುಂಗಾರು ಮಳೆ ಇನ್ನೂ ಒಂದು ವಾರ ಕಾಲ ದುರ್ಬಲವಾಗಲಿದೆ ಎಂದಿದ್ದಾರೆ.
ಇದೇ 6 ಮತ್ತು 7ರಂದು ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆಗಳು ಗೋಚರಿಸುತ್ತಿದ್ದು, ಉತ್ತರ ಒಳನಾಡಿನಲ್ಲಿ ಇನ್ನೂ ಎರಡು ವಾರಗಳ ಕಾಲ ಉತ್ತಮ ಮಳೆಯಾಗುವ ಲಕ್ಷಣಗಳಿಲ್ಲ ಎಂದಿದ್ದಾರೆ.
ಬಯಲು ಸೀಮೆಯಲ್ಲಿ ಮಳೆಯ ಕೊರತೆ ಈ ಬಾರಿಯೂ ಮುಂದುವರೆದರೆ ಜನ ಜಾನುವಾರುಗಳಿಗೆ ಭಾರೀ ತೊಂದರೆಯಾಗಲಿದೆ. ಮೈಸೂರಿನ ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರ ವ್ಯಾಪ್ತಿಯಲ್ಲಿ ಹೆಚ್ಚಿನ ರೈತರು ತಂಬಾಕು ಬೆಳೆದಿದ್ದಾರೆ. ನೀರಿನ ಅನುಕೂಲ ಇರುವವರು ಕೊಳವೆಬಾವಿಯ ನೀರನ್ನು ಹಾಯಿಸಿ ಕೃಷಿ ಮಾಡುತ್ತಿದ್ದರೆ, ಇನ್ನು ಕೆಲವರು ಮಳೆಯನ್ನು ನಂಬಿ ಕೃಷಿ ಮಾಡಿದ್ದು ಇದೀಗ ಮಳೆ ಬಾರದ ಆಕಾಶ ನೋಡುವಂತಾಗಿದೆ