ಬೆಂಗಳೂರು: ನಗರದಲ್ಲಿ ಕಾಡಾನೆಯ ದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ವೀರಾಪುರ ಗ್ರಾಮದ ಚಂದ್ರೇಗೌಡ, ನಾಗರಾಜ್, ತಿಲಕ್ ಬಂಧಿತರಾಗಿದ್ದು, ಇವರ ಬಂಧನದ ಬಳಿಕ ಮುಚ್ಚಿ ಹೋಗಿದ್ದ ಕಾಡಾನೆ ಸಾವಿನ ಪ್ರಕರಣ ಬೆಳಕಿಗೆ ಬಂದಂತಾಗಿದೆ.
ಸುಮಾರು ಆರು ತಿಂಗಳ ಹಿಂದೆ ವೀರಾಪುರದಲ್ಲಿ ರೈತರು ಬೆಳೆದ ಬೆಳೆಯನ್ನು ಕಾಡಾನೆಯೊಂದು ತಿಂದು ಹಾಳು ಮಾಡುತ್ತಿತ್ತು. ಈ ವೇಳೆ ತಮ್ಮ ಬೆಳೆಯ ರಕ್ಷಣೆಗಾಗಿ ಜಮೀನಿಗೆ ವಿದ್ಯುತ್ ಹಾಯಿಸಿದ್ದರು. ಈ ಸಂದರ್ಭ ಕಾಡಾನೆ ಜಮೀನಿಗೆ ನುಗ್ಗಿದ್ದು, ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿತ್ತು. ಈ ವಿಚಾರವನ್ನು ಅರಣ್ಯ ಇಲಾಖೆಗೆ ಮಾಹಿತಿ ನೀಡದೆ ಕಾಡಾನೆಯ ಕಳೇಬರವನ್ನು ಮಣ್ಣಿನಡಿಯಲ್ಲಿ ಹೂತು ಹಾಕಲಾಗಿತ್ತು.
ಇದಾದ ನಂತರ ಎಲ್ಲವೂ ಮರೆತು ಹೋಗಿತ್ತು. ಆದರೆ ಆರೋಪಿಗಳಾದ ಚಂದ್ರೇಗೌಡ, ನಾಗರಾಜ್, ತಿಲಕ್ ಅವರು ಮಣ್ಣನ್ನು ಅಗೆದು ಕಾಡಾನೆಯ ದಂತವನ್ನು ಹೊರ ತೆಗೆದು ಅದನ್ನು ಮಾರಾಟ ಮಾಡಲು ಸಂಚು ರೂಪಿಸಿದ್ದರು. ಈ ನಡುವೆ ದಂತದೊಂದಿಗೆ ಬೆಂಗಳೂರಿಗೆ ತೆರಳಿದ ಅವರು ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಮಾಲು ಸಹಿತ ಬಂಧಿಸಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಕಾಡಾನೆಯನ್ನು ಹೂತು ಹಾಕಿದ ವಿಚಾರ ಬೆಳಕಿಗೆ ಬಂದಿದ್ದು, ಅತ್ತ ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಗಳೊಂದಿಗೆ ವೀರಪುರಕ್ಕೆ ತೆರಳಿ ಕಾಡಾನೆಯನ್ನು ಹೂತು ಹಾಕಿರುವ ಜಾಗದ ಮಹಜರು ನಡೆಸಿ, ಜೆಸಿಬಿ ಮೂಲಕ ಮಣ್ಣು ತೆಗೆಸಿ ಕೊಳೆತ ಕಾಡಾನೆಯ ಕಳೇಬರ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.