ಬೆಂಗಳೂರು: ಪ್ರತೀ ವರ್ಷ ಜೂನ್ ಅಂತ್ಯದೊಳಗೆ ಎಲ್ಲಾ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ರಾಜ್ಯ ಲೋಕಾಯುಕ್ತಕ್ಕೆ ತಮ್ಮ ಆಸ್ತಿ ವಿವರ ಸಲ್ಲಿಸಬೇಕಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹಿತ 118 ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಇದುವರೆಗೆ ತಮ್ಮ ಆಸ್ತಿ ವಿವರಗಳನ್ನು ನೀಡಿಲ್ಲ.
ಲೋಕಾಯುಕ್ತ ಕಚೇರಿಗೆ ಆರ್ ಟಿಐ ಕಾರ್ಯಕರ್ತ ಎಚ್ ಎಂ ವೆಂಕಟೇಶ್ ಅವರು ಸಲ್ಲಿಸಿದ್ದ ಅರ್ಜಿಯಿಂದ ಈ ಮಾಹಿತಿಯು ಲಭ್ಯವಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಕೋಟಾ ಶ್ರೀನಿವಾಸ ಪೂಜಾರಿ, ಕೆ.ಎಸ್. ಈಶ್ವರಪ್ಪ, ಬಿಸಿ ಪಾಟೀಲ್, ಬಿ. ಶ್ರೀರಾಮು, ಎಸ್ ಟಿ ಸೋಮಶೇಖರ್ ಆಸ್ತಿ ವಿವರ ಸಲ್ಲಿಸದೆ ಇರುವ ಪ್ರಮುಖರು.
ಈ ಎಲ್ಲಾ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಲೋಕಾಯುಕ್ತ ನೋಟಿಸ್ ಜಾರಿ ಮಾಡಿದೆ. ಈ ಬಗ್ಗೆ ಲೋಕಾಯುಕ್ತ ಸದ್ಯದಲ್ಲೇ ಸರ್ಕಾರಕ್ಕೆ ವರದಿ ನೀಡಲಿದೆ.