ಬೆಂಗಳೂರು : ಇತ್ತೀಚೆಗೆ ಟ್ರಾನ್ಸ್ಫಾರ್ಮರ್ ಸ್ಫೋಟಕ್ಕೆ ತಂದೆ-ಮಗಳು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಸ್ಕಾಂ ಸಂಸ್ಥೆಯ ಸಹಾಯಕ ಅಭಿಯಂತರ(ಎಇ) ದಿನೇಶ್, ಕಿರಿಯ ಅಭಿಯಂತರ (ಜೆಇ) ಮಹಾಂತೇಶ್ ಬಂಧಿತ ಆರೋಪಿಗಳು.
ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದ್ದು, ಪ್ರಕರಣದಕ್ಕೆ ಸಂಬಂಧಿಸಿದಂತೆ ಈ ಇಬ್ಬರನ್ನು ಬಂಧಿಸಿರುವ ಪೊಲೀಸರು, ವಿಚಾರಣೆ ನಡೆಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಮಾ.23ರಂದು ನಿಶ್ಚಿತಾರ್ಥಕ್ಕೆ ಹಾಲ್ ಬುಕ್ ಮಾಡಿ ಬರುತ್ತಿದ್ದಾಗ ಮಂಗನಹಳ್ಳಿಯಲ್ಲಿ ಮಾರ್ಗಮಧ್ಯೆ ವಿದ್ಯುತ್ ಟ್ರಾನ್ಸ್ಫಾರ್ಮರ್ ಸ್ಫೋಟಗೊಂಡಿದ್ದು, ಶಿವರಾಜ್ (55) ಹಾಗೂ ಅವರ ಪುತ್ರಿ ಚೈತನ್ಯ (18) ಇಬ್ಬರಿಗೂ ಬೆಂಕಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದರು. ಇಬ್ಬರನ್ನೂ ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದು, ಅಲ್ಲಿ ತಂದೆ ಸಾವಿಗೀಡಾದರು. ಬಳಿಕ ಮರುದಿನ ಪುತ್ರಿ ಕೂಡ ಮೃತಪಟ್ಟಿದ್ದರು.
ಟ್ರಾನ್ಸ್ಫಾರ್ಮರ್ನಲ್ಲಿ ಸಮಸ್ಯೆ ಕಂಡುಬಂದಿದೆ ಎಂದು ಸ್ಥಳೀಯರು ಕರೆ ಮಾಡಿ ಹೇಳಿದ್ದರೂ ಬೆಸ್ಕಾಂ ಸಿಬ್ಬಂದಿ ಕ್ರಮಕೈಗೊಂಡಿಲ್ಲ. ಅದಾದ ಸ್ವಲ್ಪ ಹೊತ್ತಿನಲ್ಲಿ ಸ್ಫೋಟ ಸಂಭವಿಸಿದೆ. ಈ ದುರಂತಕ್ಕೆ ಬೆಸ್ಕಾಂ ಅಧಿಕಾರಿ-ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಮೃತರ ಸಂಬಂಧಿಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.