ಬೆಂಗಳೂರು: ಕೆ.ವಿ.ಅರ್. ಟ್ಯಾಗೋರ್ ಅವರು ಬಿಟ್ಟು ಹೋಗಿರುವ ಮೌಲ್ಯಗಳನ್ನು ಮುಂದುವರಿಸಿಕೊಂಡು, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಸಮಾಜದ್ದು..ಅಲ್ಲದೆ ಅವರು ಕಟ್ಟಿಕೊಂಡಿದ್ದ ಅನೇಕ ಮಹತ್ತರದ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕಾಗಿ ಭಾರತೀಯ ವಿದ್ಯಾ ಭವನದ ನಿರ್ದೆಶಕರು ಎನ್. ಎಸ್. ಶ್ರೀಧರ್ಮೂರ್ತಿ ಕರೆ ನೀಡಿದರು.
ಬೆಂಗಳೂರಿನ ಸಹ್ಯಾದ್ರಿ ಸಂಘವು ಕೆ.ವಿ.ಅರ್. ಟ್ಯಾಗೋರ್ ಅವರ ಸ್ಮರಣಾರ್ಥ ನೆನಪಿನಂಗಳದಲ್ಲಿಎಂಬ ಕಾರ್ಯಕ್ರಮವನ್ನು ಮೇ 12, 2022ರ ಗುರುವಾರ ಸಂಜೆ 6ಗಂಟೆಗೆ ಬೆಂಗಳೂರಿನ ಆರ್.ಸಿ. ರಸ್ತೆಯ ಭಾರತೀಯ ವಿದ್ಯಾ ಭವನದಲ್ಲಿ ಆಯೋಜಿಸಲಾಗಿದ್ದು, ಈ ವೇಳೆ ಅವರು ಮಾತನಾಡಿದರು.
ಸಾಹಿತಿಗಳು ಡಾ. ಪ್ರದಾನ್ ಗುರುದತ್ ಅವರು ಮಾತನಾಡಿ, ಟ್ಯಾಗೋರ್ ರಲ್ಲಿ ವೃತ್ತಿಪರ ದಕ್ಷತೆಯ ಜೊತೆಗೆ ಮಾನವೀಯ ಮೌಲ್ಯಗಳಿದ್ದವು. ಐಪಿಎಸ್ ಅಧಿಕಾರಿಯಾದರೂ ಯಾವುದೇ ಹಮ್ಮಿಬಿಮ್ಮಿಗಳಿಲ್ಲದೆ, ಅಗತ್ಯವುಳ್ಳವರ ನೆರವಿಗೆ ಧಾವಿಸುವ ಮಹಾನ್ ವ್ಯಕ್ತಿತ್ವ ಅವರದ್ದಾಗಿತ್ತು ಎಂಬ ಮಾತುಗಳನ್ನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೆಶಕರು ವೈ. ಕೆ. ಮುದ್ದುಕೃಷ್ಣ ಅವರು ಮಾತನಾಡಿ,ಟ್ಯಾಗೋರ್ ಅವರೊಂದಿಗಿನ ನೆನಪುಗಳನ್ನು ಹಂಚಿಕೊಂಡರು. ಯಾವುದೇ ವಿಚಾರದ ಬಗ್ಗೆ ಅತ್ಯಂತ ಅಧಿಕೃತವಾಗಿ ಮಾತನಾಡುವ ವಾಗ್ಮಿಯಾಗಿದ್ದ ಅವರು, ಪೊಲೀಸ್ ಇಲಾಖೆಯಲ್ಲಿದ್ದರೂ ಸಾಹಿತ್ಯದ ಅಭಿರುಚಿ, ಗಮಕದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರು. ಗಮಕವನ್ನು ನಾಡಿಗೆ ಪರಿಚಯಿಸುವ ನಿಟ್ಟಿನಲ್ಲಿ ಎಲೆಮರೆಯ ಕಾಯಿಯಂತೆ ಕೆಲಸ ಮಾಡಿದವರಲ್ಲಿ ಟ್ಯಾಗೋರ್ ಅವರು ಪ್ರಮುಖರು ಎಂಬುದಾಗಿ ಅವರು ಹೇಳಿದರು.
ಬರಹಗಾರರು ಹಾಗೂ ಭಾರತೀಯ ವಿದ್ಯಾ ಭವನದ ನಿರ್ದೆಶಕರು ಹೆಚ್. ಎನ್. ಸುರೇಶ್ ಮತ್ತು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಬೆಂಗಳೂರಿನ ಸಹ್ಯಾದ್ರಿ ಸಂಘದ ಅಧ್ಯಕ್ಷರು ಡಿ. ಸಿ. ಶ್ರೀಧರ್, ಐ.ಆರ್.ಎ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.