ಬೆಂಗಳೂರು: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಅಭಿವೃದ್ಧಿಯ ಕುರಿತು ಮಾಸಿಕ ವರದಿ ನೀಡಬೇಕು. ನಿರ್ಲಕ್ಷ್ಯ ಸಲ್ಲದು. ಹಳ್ಳಿಗಳತ್ತ ಹೆಚ್ಚಿನ ಪ್ರವಾಸ ಮಾಡಿ, ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಸೂಚನೆ ನೀಡಲಾಗಿದೆಯೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸುದೀರ್ಘ ಐದು ತಾಸುಗಳ ಕಾಲ ರಾಜ್ಯದ ಎಲ್ಲ ಜಿ.ಪಂ. ಸಿಇಒಗಳ ಸಭೆ ನಡೆಸಿದ ಸಿಎಂ ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರಥಮ ಬಾರಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳ ವೀಡಿಯೋ ಕಾನ್ಫರೆನ್ಸ್ ನಡೆಸಲಾಗಿದೆ. ಅಧಿಕಾರ ವಿಕೇಂದ್ರೀಕರಿಸಿದ ನಂತರ ಜಿ.ಪಂ. ಸಿಇಒಗಳ ಪಾತ್ರ ಮಹತ್ವದ್ದು. ಹೀಗಾಗಿ ಜಿಲ್ಲಾಧಿಕಾರಿ ಮತ್ತು ಸಿಇಒಗಳ ಪ್ರತ್ಯೇಕ ಸಭೆಯನ್ನು ಏರ್ಪಡಿಸಲಾಗಿದೆ. ಜಿ.ಪಂ. ಸಿಇಒಗಳಿಗೆ ಅಭಿವೃದ್ಧಿ ವಿಚಾರಗಳು ಪ್ರಮುಖವಾದದ್ದು ಎಂದರಿತು ಈ ಸಭೆ ಮಾಡಿದ್ದೇವೆ ಎಂದರು.
ಜಲಜೀವನ್ ಮಿಷನ್, ಪ್ರಧಾನ ಮಂತ್ರಿ ಆವಾಸ್, ಬಸವ ಆವಾಸ್ ಯೋಜನೆ ಸಹಿತ ವಿವಿಧ ವಸತಿ ಯೋಜನೆಗಳ ಬಗ್ಗೆ, ನರೇಗಾದಲ್ಲಿ ಬದಲಾವಣೆ ತರುವುದು, ಬಡತನ ರೇಖೆಗಿಂತ ಮೇಲೆತ್ತುವುದು, ಅಮೃತ್ ಯೋಜನೆ ಅನುಷ್ಠಾನ, ಎಸ್ಸಿ-ಎಸ್ಟಿ ಹಾಸ್ಟೆಲ್ಗಳ ಸ್ಥಿತಿಗತಿ, ಶಾಲೆಗಳ ಸ್ಥಿತಿಗತಿ, ಆರೋಗ್ಯ ಇಲಾಖೆ, ಕೋವಿಡ್ ನಿರ್ವಹಣೆ, ಲಸಿಕೆ ನೀಡಿಕೆ ಮೊದಲಾದ ವಿಚಾರಗಳ ಸಂಬಂಧಿಸಿ ಸುದೀರ್ಘ ಚರ್ಚೆ ನಡೆಸಲಾಗಿದೆ. ಹಲವಾರು ಸಲಹೆ-ಸೂಚನೆಗಳನ್ನು ಕೊಟ್ಟಿದ್ದೇವೆ. ಯಾವುದೇ ಜಿಲ್ಲೆಯಲ್ಲಾದ ಒಳ್ಳೆಯ ಕೆಲಸದ ಮಾಹಿತಿ ಪರಸ್ಪರ ಜಿಲ್ಲೆಗಳಲ್ಲಿ ಹಂಚಿಕೊಳ್ಳಬೇಕು. ಅವುಗಳನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಹೇಳಿದರು.