ಬೆಂಗಳೂರು : ಭಾರತ ಸರ್ಕಾರದ ನಿರ್ದೇಶನದಂತೆ ಜನವರಿ 3, 2022ರಂದು ರಾಜ್ಯದ ಎಲ್ಲಾ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕಾಕರಣಕ್ಕೆ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದಿರುವಂತ ಅವರು, ರಾಜ್ಯದಲ್ಲಿ ಜನವರಿ 16, 2021ರಿಂದ ಕೋವಿಡ್-19 ಲಸಿಕಾಕರಣವನ್ನು ವಿವಿಧ ಗುಂಪಿನ ಫಲಾನುಭವಿಗಳಿಗೆ ವಿವಿಧ ಹಂತಗಳಲ್ಲಿ ನಡೆಸಲಾಯಿತು.
ಇದುವರೆಗೆ ರಾಜ್ಯದಲ್ಲಿ 8.5 ಕೋಟಿಗಿಂತ ಹೆಚ್ಚು ಲಸಿಕಾ ಡೋಸ್ ನೀಡಿಕೆಯ ಗಮನಾರ್ಹ ಪ್ರಗತಿಯನ್ನು ಸಾಧಿಸಲಾಗಿದೆ. ಶೇ.97ರಷ್ಟು ಜನರಿಗೆ ಮೊದಲನೇ ಡೋಸ್ ಹಾಗೂ ಶೇ.77ರಷ್ಟು ಜನರಿಗೆ ಎರಡನೇ ಡೋಸ್ ಲಸಿಕೆಯನ್ನು ಈವರೆಗೆ ನೀಡಲಾಗಿದೆ. ಈ ಕಾರ್ಯದಲ್ಲಿ ಕೆಲಸ ಮಾಡಿದಂತ ಎಲ್ಲರಿಗೂ ಅಭಿನಂದನೆ ತಿಳಿಸಿದ್ದಾರೆ.
ಇತ್ತೀಚೆಗೆ ಕೋವಿಡ್ ಪ್ರಕರಣಗಳ ಸಂಖ್ಯೆ ಹಾಗೂ ಓಮಿಕ್ರಾನ್ ವೈರಸ್ ಪ್ರಕರಣಗಳು ಹೆಚ್ಚುತ್ತಿವೆ. ಭಾರತ ಸರ್ಕಾರದ ನಿರ್ದೇಶನದನ್ವಯ ಜನವರಿ 3, 2022ರಿಂದ ರಾಜ್ಯದ ಎಲ್ಲಾ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕಾಕರಮ ನಡೆಸಬೇಕಾಗಿರುತ್ತದೆ.
ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಈ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಸಮನ್ವಯಿಸಲಿದ್ದು, ದಿನಾಂಕ 3-01-2022ರಂದು ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ತಮ್ಮ ಜಿಲ್ಲೆಗಳಲ್ಲಿ ಹಾಗೂ ವಿಧಾನಸಭಾ ಸದಸ್ಯರು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಮಕ್ಕಳಿಗೆ ಲಸಿಕಾರರಣ ಕಾರ್ಯಕ್ರಮಕ್ಕೆ ಚಾಲನೆ ನೀಡುವಂತೆ ಕೋರಿದ್ದಾರೆ.