ಬೆಂಗಳೂರು: ಚುನಾವಣಾ ಆಯೋಗವು ಎಷ್ಟೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೂ ಅದು ಚುನಾವಣೆಯಲ್ಲಿ ಹಣದ ಹೊಳೆ ಹರಿಯುವುದನ್ನು ನಿಲ್ಲಿಸಲಾಗಿಲ್ಲ ಎನ್ನುವುದಕ್ಕೆ ಈ ಸಲದ ರಾಜ್ಯ ವಿಧಾನಸಭೆ ಚುನಾವಣೆಯಿಂದ ಸಾಬೀತಾಗಿದೆ. ಯಾಕೆಂದರೆ ಈ ಚುನಾವಣೆಗೆ ಎಲ್ಲಾ ಪಕ್ಷಗಳು ಸೇರಿಕೊಂಡು ಖರ್ಚು ಮಾಡಿರುವುದು ಹತ್ತು ಸಾವಿರ ಕೋಟಿಗೂ ಮೀರಿ.
ಈ ಸಲದ ವಿಧಾನಸಭೆ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಸೇರಿ ಎಷ್ಟು ಹಣ ಖರ್ಚು ಮಾಡಿದೆ ಎಂದು ಸಮೀಕ್ಷೆ ನಡೆಸಿದ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ಸಂಸ್ಥೆಯು ಈ ಅಂಕಿಅಂಶವನ್ನು ತನ್ನ ವೆಬ್ ಸೈಟ್ ನಲ್ಲಿ ಹಾಕಿದೆ.
ಈ ಸಲದ ವಿಧಾನಸಭೆ ಚುನಾವಣೆಯು ಮೂರು ಪಕ್ಷಗಳಿಗೆ ಪ್ರತಿಷ್ಠೆಯಾಗಿರುವ ಕಾರಣ ಹಣದ ಹೊಳೆಯೇ ಹರಿದಿದೆ ಎಂದು ಸಮೀಕ್ಷೆ ಹೇಳಿದೆ. ಎಲ್ಲಾ ರಾಜಕೀಯ ಪಕ್ಷಗಳು ಬರೋಬ್ಬರಿ 9,500-10,500 ಕೋಟಿ ರೂ. ಹಣ ಖರ್ಚಾಗಿದೆ.
ಪ್ರತೀ ಸಲವೂ ಕರ್ನಾಟಕದಲ್ಲಿ ಅತೀ ಹೆಚ್ಚಿನ ಹಣ ವಿಧಾನಸಭೆ ಚುನಾವಣೆಗೆ ಹರಿಸಲಾಗುತ್ತದೆ. ಈ ಸಲದ ಖರ್ಚು ದಾಖಲೆಯದ್ದಾಗಿದೆ. 2013ರ ಚುನಾವಣೆಗಿಂತ ಇದು ದುಪ್ಪಟ್ಟು ಎಂದು ಸಮೀಕ್ಷೆ ಹೇಳಿದೆ.
ಚುನಾವಣೆಯಲ್ಲಿ ಹೆಚ್ಚಿನ ಪಕ್ಷಗಳು ಅಭ್ಯರ್ಥಿಯಿಂದಲೇ ಶೇ.75ರಷ್ಟು ಹಣ ಖರ್ಚು ಮಾಡಿಸಿದೆ. ಉಳಿದ ಖರ್ಚನ್ನು ಪಕ್ಷಗಳು ಭರಿಸಿವೆ ಎಂದು ಸಮೀಕ್ಷೆ ತಿಳಿಸಿದೆ.
ಚುನಾವಣಾ ಆಯೋಗವು ನ್ಯಾಯೋಚಿತ, ಪಾರದರ್ಶಕ ಚುನಾವಣೆ ಎಂದು ಹೇಳಿದರೂ ರಾಜಕೀಯ ಪಕ್ಷಗಳು ತಮ್ಮದೇ ದಾಟಿಯಲ್ಲಿ ಹಣ ಖರ್ಚು ಮಾಡಿವೆ.