ಬೆಂಗಳೂರು : ನಿವೃತ್ತ ಸಿವಿಲ್ ಎಂಜಿನಿಯರ್ಗೆ ಸೇರಿದ ಫ್ಲ್ಯಾಟ್ನಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದ ಬಿಹಾರ ಮೂಲದ ಮೂವರು ಆರೋಪಿಗಳನ್ನು ಘಟನೆ ನಡೆದ 24 ಗಂಟೆಯಲ್ಲೇ ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ಬಬ್ಲೂ ಪಾಸ್ವಾನ್(45), ಆತನ ಸಂಬಂಧಿಗಳಾದ ಬೋರಾ ಪಾಸ್ವಾನ್(33) ಹಾಗೂ ಶ್ರೀಧರ್ ಪಾಸ್ವಾನ್(30) ಬಂಧಿತರು.
ಆರೋಪಿಗಳಿಂದ 1.25 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಡೈಮಂಡ್, ಬೆಳ್ಳಿ, ವಿದೇಶಿ ಕರೆನ್ಸಿಗಳು, 50 ಸಾವಿರ ರೂ. ನಗದು ಜಪ್ತಿ ಮಾಡಲಾಗಿದೆ.
ಆರೋಪಿಗಳು ಏ.27ರಂದು ರಾತ್ರಿ ಆಂಧ್ರಪ್ರದೇಶದ ಅನಂತಪುರ ಮೂಲದ ನಿವೃತ್ತ ಸಿವಿಲ್ ಎಂಜನಿಯರ್ ತಾಜ್ಮುಲ್ ಬಾಷಾಗೆ ಸೇರಿ ಫ್ಲ್ಯಾಟ್ನ ಬಾಲ್ಕನಿಯ ಸ್ಲೈಡಿಂಗ್ ಬಾಗಿಲು ಮುರಿದು ಸುಮಾರು 2 ಕೆ.ಜಿ. 900 ಗ್ರಾಂ ತೂಕದ ಚಿನ್ನಾಭರಣ ಹಾಗೂ 1.10 ಲಕ್ಷ ರೂ. ನಗದು ದೋಚಿದ್ದರು. ಹುಳಿಮಾವು ಪೊಲೀಸರು ಸಿನಿಮೀಯ ಶೈಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ತಾಜ್ಮುಲ್ ಬಾಷಾ ಇತ್ತೀಚೆಗೆ ರೋಶನ್ ಪ್ಲಾಟಿನಂ ಅಪಾರ್ಟ್ಮೆಂಟ್ನಲ್ಲಿ ಫ್ಲ್ಯಾಟ್ ಖರೀದಿಸಿದ್ದು, ಮಾ.27ರಂದು ಗೃಹ ಪ್ರವೇಶ ಮಾಡಿ ಏ.21ರಂದು ಕುಟುಂಬದ ಜತೆ ವಾಸವಾಗಿದ್ದರು. ಏ.24ರಂದು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಹಿತ ಹೈದರಾಬಾದ್ಗೆ ತೆರಳಿದ್ದರು. ಏ.27ರಂದು ಮರಳಿದ್ದ ವೇಳೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳು ರೈಲಿನ ಮೂಲಕ ಬಿಹಾರ ಹೋಗುತ್ತಿದ್ದರು. ಅದೇ ವೇಳೆ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿಗಳ ಜಾಡು ಪತ್ತೆಯಾಗಿತ್ತು. ಆರೋಪಿಗಳು ಬಂಗಾರ ಪೇಟೆ ಬಳಿ ಇರುವ ಮಾಹಿತಿ ಸಿಕ್ಕಿತ್ತು. ಮತ್ತೊಂದೆಡೆ ಬಿಹಾರಕ್ಕೆ ತೆರಳುವ ರೈಲು ಬಂಗಾರಪೇಟೆ ನಿಲ್ದಾಣಕ್ಕೆ 2 ಗಂಟೆ ತಡವಾಗಿ ಬಂದಿದೆ. ಅಷ್ಟರಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ ಹೇಳಿದರು.
ಆರೋಪಿಗಳ ಪೈಕಿ ಬಬ್ಲೂ ಪಾಸ್ವಾನ್ ಆರು ವರ್ಷಗಳಿಂದ ರೋಶನ್ ಪ್ಲಾಟಿನಂ ಅಪಾರ್ಟ್ಮೆಂಟ್ನಲ್ಲಿ ಗಾರ್ಡನ್ ನಿರ್ವಹಣೆ ಕೆಲಸ ಮಾಡುತ್ತಿದ್ದ. ಕೊರೊನಾ ಹಿನ್ನೆಲೆಯಲ್ಲಿ ಆರು ತಿಂಗಳ ಹಿಂದೆ ಬಿಹಾರಕ್ಕೆ ತೆರಳಿದ್ದ ಆರೋಪಿಗೆ ಅಪಾರ್ಟ್ಮೆಂಟ್ನ ಮ್ಯಾನೇಜರ್ ಗಾರ್ಡನ್ ಕೆಲಸಕ್ಕೆ ಹೆಚ್ಚುವರಿಯಾಗಿ ಇಬ್ಬರನ್ನು ಕರೆತರುವಂತೆ ಹೇಳಿದ್ದರು. ತನ್ನೊಂದಿಗೆ ಇತರೆ ಇಬ್ಬರು ಆರೋಪಿಗಳನ್ನು ಕರೆತಂದಿದ್ದ ಆರೋಪಿ ಕೆಲಸ ಮುಗಿಸಿಕೊಂಡು ಪಾರ್ಕಿಂಗ್ ಸ್ಥಳದಲ್ಲಿ ವಾಸವಾಗಿದ್ದರು. ಕಳ್ಳತನ ಮಾಡಲೆಂದು ಮೂವರು ಆರೋಪಿಗಳು ಅಪಾರ್ಟ್ಮೆಂಟ್ನಲ್ಲಿರುವ ಫ್ಲ್ಯಾಟ್ಗಳಲ್ಲಿನ ನಿವಾಸಿಗಳ ಬಗ್ಗೆ ಗಮನ ಹರಿಸಿದ್ದರು. ಏ.24ರಂದು ತಾಜ್ಮುಲ್ ಬಾಷಾ ಕುಟುಂಬದವರು ಹೈದರಾಬಾದ್ಗೆ ಹೋಗುವ ವಿಚಾರ ತಿಳಿದುಕೊಂಡಿದ್ದ ಎಂದು ಪೊಲೀಸರು ಹೇಳಿದರು.