ಬೆಂಗಳೂರು: ಕಂದಾಯ ಸಚಿವ ಆರ್. ಅಶೋಕ್ ಅವರು ಗ್ರಾಮ ವಾಸ್ತವ್ಯ ಮಾಡಿ, ಅಲ್ಲಿನ ಜನರಿಗೆ ಆಗುತ್ತಿರುವಂತಹ ನಿಜವಾದ ಸಮಸ್ಯೆಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಲಿರುವರು.
ಫೆ.20ರಂದು ಅವರು ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿಯಲ್ಲಿ ವಾಸ್ತವ್ಯ ಹೂಡಲಿರುವರು. ಅವರು ಎತ್ತಿನಗಾಡಿಯಲ್ಲಿ ಗ್ರಾಮಕ್ಕೆ ತೆರಳುವರು. ಅಲ್ಲಿ ಅವರು ದಲಿತ ಕಾಲನಿಗೆ ಕೂಡ ಭೇಟಿ ನೀಡಲಿದ್ದಾರೆ. ಜನರು ಎದುರಿಸುತ್ತಿರುವಂತಹ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲಿರುವರು.
ಸಂಜೆ ವೇಳೆ ಅವರು ಕಲಾವಿದರ ಜತೆಗೆ ಮಾತುಕತೆ ನಡೆಸಲಿರುವರು. ರಾತ್ರಿ ಅವರು ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಹಾಸ್ಟೆಲ್ ನಲ್ಲಿ ಉಳಿದುಕೊಳ್ಳಲಿರುವರು.
ಇದೇ ದಿನ ರಾಜ್ಯದಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳು ಗ್ರಾಮ ಭೇಟಿಯನ್ನು ಆರಂಭಿಸಲಿರುವರು. ಪ್ರತೀ ತಿಂಗಳ ಮೂರನೇ ಶನಿವಾರದಂದು ಒಂದೊಂದು ಗ್ರಾಮಕ್ಕೆ ಹೋಗಿ ಅಲ್ಲಿನ ಜನರ ಸಮಸ್ಯೆಗಳನ್ನು ತಿಳಿದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.