ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ 2021-22ನೇ ಸಾಲಿನ ನವೆಂಬರ್ ಅಂತ್ಯದವರೆಗೆ ರೂ.2,560 ಕೋಟಿ ರಾಜಧನ ಸಂಗ್ರಹಣೆಗೆ ಗುರಿ ನಿಗಧಿಪಡಿಸಿದ್ದು, ರೂ.4,083.54 ಕೋಟಿ ಸಂಗ್ರಹಿಸಿ ಶೇಕಡ 160 ರಷ್ಟು ಗುರಿಯನ್ನು ಸಾಧಿಸಲಾಗಿರುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಹಾಲಪ್ಪ ಬಸಪ್ಪ ಆಚಾರ್ ಅವರು ತಿಳಿಸಿದರು.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು 2015-16ನೇ ಸಾಲಿನಿಂದ 2021ರ ನವೆಂಬರ್ ಅಂತ್ಯದವರೆಗೆ ಜಿಲ್ಲಾ ಖನಿಜ ಪ್ರತಿಷ್ಟಾನ ನಿಧಿ ಅಡಿಯಲ್ಲಿ ರೂ.3025.22 ಕೋಟಿ ಸಂಗ್ರಹಿಸಲಾಗಿದ್ದು, PMKKKY ಯೋಜನೆಗಳಿಗೆ ರೂ.997.60 ಕೋಟಿ ಮತ್ತು ಕೋವಿಡ್-19 ವೈರಾಣು ತಡೆಗಟ್ಟಲು ರೂ.183.38 ಕೋಟಿ ಒಟ್ಟು ರೂ.1180.98 ಕೋಟಿ ಖರ್ಚು ಮಾಡಲಾಗಿರುತ್ತದೆ.
ಮುಖ್ಯ ಖನಿಜಗಳಾದ ಕಬ್ಬಿಣದ ಅದಿರು, ಮ್ಯಾಂಗನೀಸ್, ಬಾಕ್ಸೈಟ್, ಸುಣ್ಣದ ಕಲ್ಲು, ಚಿನ್ನ ಮತ್ತು ಇತರೆ ಖನಿಜಗಳ ಗಣಿಗಾರಿಕೆಗೆ ಒಟ್ಟು 311 ಗಣಿ ಗುತ್ತಿಗೆಗಳು ಮಂಜೂರಾಗಿದ್ದು, ಉಪ ಖನಿಜಗಳಾದ ಅಲಂಕಾರಿಕ ಶಿಲೆ (ಗ್ರಾನೈಟ್), ಕಟ್ಟಡ ಕಲ್ಲು, ಮರಳು, ಲ್ಯಾಟರೈಟ್, ಮುರ್ರಂ, ಸ್ಯಾಂಡ್ ಸ್ಟೋನ್, ಸಿಲಿಕಾಸ್ಯಾಂಡ್, ಕ್ವಾಡ್ಜ್ ಮತ್ತು ನದಿ ಮರಳು ಗಣಿಗಾರಿಕೆಗಾಗಿ ಒಟ್ಟು 3521 ಕಲ್ಲು ಗಣಿಗುತ್ತಿಗೆಗಳು ಮಂಜೂರಾಗಿರುತ್ತವೆ. ಲೈಸೆನ್ಸ್ ನೀಡಿದ ಜಲ್ಲಿ ಕ್ರಷರ್ ಗಳ ಸಂಖ್ಯೆ -1914, ಮರಳು ಬೇಡಿಕೆ ಅಂದಾಜು – 45 ದಶ ಲಕ್ಷ ಮೆಟ್ರಿಕ್ ಟನ್, ಪೂರೈಕೆ – 37 ದಶ ಲಕ್ಷ ಮೆಟ್ರಿಕ್ ಟನ್, ಎಂ-ಸ್ಯಾಂಡ್ ಉತ್ಪಾದನೆ – 30 ದಶಲಕ್ಷ ಮೆಟ್ರಿಕ್ ಟನ್, ನದಿಪಾತ್ರ ಮತ್ತು ಪಟ್ಟಾಜಮೀನುಗಳಲ್ಲಿ ಗಣಿಗಾರಿಕೆಯಿಂದ – 4.5 ದಶ ಲಕ್ಷ ಟನ್, ಹೊರ ರಾಜ್ಯಗಳಿಂದ ಎಂ-ಸ್ಯಾಂಡ್ ಮತ್ತು ನದಿ ಮರಳು ಸರಬರಾಜು – 2.5 ದಶ ಲಕ್ಷ ಟನ್, ಮರಳಿನ ಕೊರತೆ – 8 ದಶ ಲಕ್ಷ ಟನ್ ಗಣಿ, ಕಲ್ಲು ಗಣಿ ಗುತ್ತಿಗೆ ಮಂಜೂರಾತಿ ನೀಡಲಾಗಿದೆ.
ರಾಜ್ಯದಲ್ಲಿನ ಸರ್ಕಾರಿ ಕಾಮಗಾರಿ ಮತ್ತು ಸಾರ್ವಜನಿಕರ ನಿರ್ಮಾಣ ಕಾಮಗಾರಿಗೆ ಕಡಿಮೆ ದರದಲ್ಲಿ ಮರಳನ್ನು ಪೂರೈಸುವ ಸಂಬಂಧ ಹೊಸ ಮರಳು ನೀತಿ – 2020ನ್ನು ಜಾರಿಗೆ ತಂದು, ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) 2021 ನ್ನು ರಚಿಸಲಾಗಿದೆ.
ಹೊಸ ಮರಳು ನೀತಿಯಲ್ಲಿ ಸರ್ಕಾರದಿಂದ ಅಧಿಸೂಚನೆ ಮೂಲಕ ನಿಗಧಿಪಡಿಸಿದ ಸರ್ಕಾರಿ ಸಂಸ್ಥೆ, ಇಲಾಖೆಯಿಂದ ಮರಳು ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗಿರುತ್ತದೆ. ಗ್ರಾಹಕರಿಗೆ ಆನ್ ಲೈನ್ ಬುಕಿಂಗ್ ಮೂಲಕ ಮರಳು ಖರೀದಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.
ಗ್ರಾಮ ಪಂಚಾಯತ್ ಗಳ ಮೂಲಕ I, II ಮತ್ತು III ನೇ ಶ್ರೇಣಿಯಲ್ಲಿ ಹಳ್ಳಗಳ ಪಾತ್ರಗಳಲ್ಲಿ ವಿಲೇವಾರಿ ಮಾಡುವ ಪ್ರತಿ ಮೆಟ್ರಿಕ್ ಮರಳಿಗೆ ರೂ.300/- ಗಳ ಮಾರಾಟ ದರವನ್ನು ನಿಗಧಿಪಡಿಸಲಾಗಿರುತ್ತದೆ. ಸರ್ಕಾರಿ ಸಂಸ್ಥೆಗಳ ಮೂಲಕ ಉನ್ನತ ಶ್ರೇಣಿಯ ಹಳ್ಳ, ನದಿಗಳ ಪಾತ್ರಗಳಲ್ಲಿ ವಿಲೇವಾರಿ ಮಾಡುವ ಪ್ರತಿ ಮೆಟ್ರಿಕ್ ಮರಳಿಗೆ ರೂ.700 ಗಳ ಮಾರಾಟ ದರವನ್ನು ನಿಗಧಿಪಡಿಸಲಾಗಿರುತ್ತದೆ. ಅನಧಿಕೃತ ಮರಳು ಗಣಿಗಾರಿಕೆ ಚಟುವಟಿಕೆಗಳನ್ನು ನಿಯಂತ್ರಿಸಲು ಖನಿಜ ರಕ್ಷಣಾ ಪಡೆಗಳನ್ನು ರಚಿಸಲಾಗಿರುತ್ತದೆ. I, II ಮತ್ತು III ನೇ ಶ್ರೇಣಿಯಲ್ಲಿ ದೊರೆಯುವ ಮರಳನ್ನು ಗ್ರಾಮ ಪಂಚಾಯಿತಿ ಮೂಲಕ ವಿಲೇ ಪಡಿಸಲು 316 ಮರಳು ಬ್ಲಾಕ್ಗಳನ್ನು ಗುರುತಿಸಲಾಗಿರುತ್ತದೆ. 187 ಬ್ಲಾಕುಗಳಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಈ ಪೈಕಿ 169 ಬ್ಲಾಕುಗಳಲ್ಲಿ ಕಾರ್ಯಾದೇಶ ನೀಡಲಾಗಿರುತ್ತದೆ. 11 ಬ್ಲಾಕುಗಳಲ್ಲಿ ಮರಳು ತೆಗೆಯಲು ಪ್ರಾರಂಭಿಸಲಾಗಿರುತ್ತದೆ. ಉನ್ನತ ಶ್ರೇಣಿಯ ಹಳ್ಳಗಳ ಪಾತ್ರಗಳಲ್ಲಿ ಮರಳು ಗಣಿಗಾರಿಕೆ ನಡೆಸಲು ಕೆ.ಎಸ್.ಎಂ.ಸಿ.ಎಲ್ ರವರಿಗೆ 38 ಮತ್ತು ಹೆಚ್.ಜಿ.ಎಂ.ಎಲ್ ರವರಿಗೆ 56 ಮರಳು ಬ್ಲಾಕ್ಗಳನ್ನು ಗುರುತಿಸಿ ಅಧಿಸೂಚನೆ ಹೊರಡಿಸಲಾಗಿರುತ್ತದೆ.
ಅಣೆಕಟ್ಟು, ಬ್ಯಾರೆಜ್ ಹಾಗೂ ಅವುಗಳ ಹಿಂದಿನ ಪ್ರದೇಶಗಳಲ್ಲಿ ಹೂಳಿನೊಂದಿಗೆ ದೊರೆಯುವ ಮರಳನ್ನು ವಿಲೇ ಪಡಿಸಲು ಕೆ.ಎಸ್.ಎಂ.ಸಿ.ಎಲ್ ರವರಿಗೆ 07 ಮತ್ತು ಹೆಚ್.ಜಿ.ಎಂ.ಎಲ್ ರವರಿಗೆ 04 ಪ್ರದೇಶಗಳನ್ನು ಗುರುತಿಸಿ ಅಧಿಸೂಚನೆ ಹೊರಡಿಸಲಾಗಿರುತ್ತದೆ ಎಂದು ತಿಳಿಸಿದರು.