ಬೆಂಗಳೂರು : ಕೊರೊನಾ ಮೂರನೆ ಅಲೆ ಭೀತಿ ಮತ್ತು ರೂಪಾಂತರಿ ಓಮಿಕ್ರಾನ್ ವೈರಸ್ ತಡೆಗೆ ಕಠಿಣ ನಿಯಮ ಜಾರಿಗೆ ಮುಂದಾಗಿರುವ ಸರ್ಕಾರ ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲು ನಿರ್ಧರಿಸಿದೆ. ತಾಂತ್ರಿಕ ಸಲಹಾ ಸಮಿತಿ ಹೊಸ ವರ್ಷಾಚರಣೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಡಿ.22ರಿಂದ ಜ.2ರ ವರೆಗೆ ಜನಸಂದಣಿ ದಟ್ಟಣೆ ನಿಯಂತ್ರಿಸಬೇಕೆಂದು ಸಲಹೆ ನೀಡಿದೆ. ಹಾಗಾಗಿ ಈ ನಡುವೆ ನಡೆಯುವ ಕಾರ್ಯಕ್ರಮಗಳಿಗೆ ಹಲವು ಮಾರ್ಗಸೂಚಿಗಳನ್ನು ರೂಪಿಸಿದೆ. ಹೊಸ ವರ್ಷಾಚರಣೆ ಹಾಗೂ ಕ್ರಿಸ್ಮಸ್ಗೆ ಮಾರ್ಗಸೂಚಿಗಳನ್ನು ರೂಪಿಸುವಂತೆ ಸಲಹೆ ಮಾಡಿದ್ದು, ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ.
ದೇವಸ್ಥಾನ, ಚರ್ಚ್, ಮಸೀದಿಗಳಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವಂತೆ ತಾಂತ್ರಿಕ ಸಲಹಾ ಸಮಿತಿ ಸಲಹೆ ಮಾಡಿದೆ. ಹೆಚ್ಚು ಜನದಟ್ಟಣೆ ತಡೆಯುವ ನಿಟ್ಟಿನಲ್ಲಿ ಎರಡು ವಾರಗಳ ಕಾಲ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ಸಲಹೆಯಲ್ಲಿ ಉಲ್ಲೇಖಿಸಿದೆ.
ದೇವಸ್ಥಾನ, ಮಸೀದಿ, ಚರ್ಚ್ಗಳಿಗೆ ಆಗಮಿಸುವವರು ಕಡ್ಡಾಯ ಎರಡು ಡೋಸ್ ವ್ಯಾಕ್ಸಿನ್ ಪಡೆದಿರಬೇಕು. ಪಬ್, ಕ್ಲಬ್ಗಳಲ್ಲಿ ಕೇವಲ 50 ಮಂದಿಗೆ ಮಾತ್ರ ಅವಕಾಶ ಇರಬೇಕು. ಇಲ್ಲಿಗೆ ಬರುವ ಗ್ರಾಹಕರು ಕೂಡ ಎರಡು ಡೋಸ್ ವ್ಯಾಕ್ಸಿನ್ ಪಡೆದಿರಬೇಕು. ಹೊರಾಂಗಣ ಪ್ರದೇಶದಲ್ಲಿ 3.5ಚದರ ಮೀಟರ್ನಲ್ಲಿ 200 ರಿಂದ 300 ಜನರಿಗೆ ಸೀಮಿತಗೊಳಿಸಬೇಕು. ದೇಗುಲ, ಚರ್ಚ್, ಮಸೀದಿಗಳಲ್ಲಿ ಅಂತರ ಕಾಪಾಡಿಕೊಳ್ಳಲು ಮಾರ್ಷಲ್ಗಳನ್ನು ನಿಯೋಜನೆ ಮಾಡುವುದು ಸೇರಿದಂತೆ ಹಲವು ಸಲಹೆಗಳನ್ನು ನೀಡಿದೆ.
ಕೊರೊನಾ ಸಂಖ್ಯೆ ಮತ್ತೆ ಏರಿಕೆಯಾಗುತ್ತಿರುವುದರ ಜತೆಗೆ ರೂಪಾಂತರಿ ಓಮಿಕ್ರಾನ್ ಭೀತಿ ಕೂಡ ಎದುರಾಗಿದೆ. ಮೊದಲನೆ ಮತ್ತು ಎರಡನೆ ಅಲೆಯಲ್ಲಿ ಸಾಕಷ್ಟು ಪ್ರಾಣಹಾನಿ ಉಂಟಾಗಿದೆ. ಮತ್ತೆ ಆ ಪರಿಸ್ಥಿತಿ ಮರುಕಳಿಸಬಾರದು ಎಂಬ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.