ಬೆಂಗಳೂರು, ಜ.11 : ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರಿಗೆ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೋವಿಡ್ ದೃಢವಾಗಿದ್ದು, ಅವರ ಜೊತೆಗೆ ನಿರಂತರವಾಗಿ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಆರೋಗ್ಯ ಸಚಿವ ಡಾ. ಸುಧಾಕರ್ ಸಹ ಪ್ರಾಥಮಿಕ ಸಂಪರ್ಕಕ್ಕೆ ಒಳಪಟ್ಟಿದ್ದರು. ಈ ಕಾರಣದಿಂದ ಅವರೂ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಆದರೆ, ವರದಿಯಲ್ಲಿ ನೆಗೆಟಿವ್ ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ.
‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಅವರ ಪ್ರಾಥಮಿಕ ಸಂಪರ್ಕಿತನಾದ್ದರಿಂದ ನಾನು ಎರಡು ದಿನಗಳ ಕಾಲ ಸ್ವಯಂ ಪ್ರೇರಿತನಾಗಿ ಐಸೋಲೇಶನ್ ಗೆ ಒಳಪಡುತ್ತಿದ್ದೇನೆ. ಇಂದು ಸಂಜೆ ಮಾಡಿಸಿದ Abott ID NOW ಪರೀಕ್ಷೆಯಲ್ಲಿ ನೆಗಟಿವ್ ಬಂದಿದ್ದು, 2 ದಿನಗಳ ನಂತರ RT-PCR ಪರೀಕ್ಷೆಗೆ ಒಳಪಡಲಿದ್ದೇನೆ’ ಎಂದು ಹೇಳಿದ್ದಾರೆ.
‘ನನಗೆ ಯಾವುದೇ ರೀತಿಯ ರೋಗ ಲಕ್ಷಣಗಳಿಲ್ಲದಿದ್ದರೂ, ಇತರರ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ನೈತಿಕ ಜವಾಬ್ದಾರಿ ಹೊತ್ತು ಮುಂದಿನ ಎರಡು ದಿನಗಳ ಕಾಲ ನಾನು ಪ್ರತ್ಯೇಕವಾಗಿರಲಿದ್ದೇನೆ. ನನ್ನ ಎಲ್ಲ ಅಧಿಕೃತ ಕಾರ್ಯಕ್ರಮಗಳು ರದ್ದಾಗಿದ್ದು, ಸಭೆ, ಕಡತ ವಿಲೇವಾರಿ ಕಾರ್ಯಗಳನ್ನು ವರ್ಚ್ಯುಯಲ್ ಮಾಧ್ಯಮಗಳ ಮೂಲಕ ಮುಂದುವರಿಸಲಿದ್ದೇನೆ’ ಎಂದು ಸಚಿವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಆದ್ದರಿಂದ ಮುಂದಿನ ಎರಡು ದಿನಗಳ ಕಾಲ ನನ್ನನ್ನು ಭೌತಿಕವಾಗಿ ಭೇಟಿ ಮಾಡಲು ಯಾರೂ ಬರಬಾರದೆಂದು ಮನವಿ ಮಾಡುತ್ತೇನೆ. ಎರಡು ದಿನಗಳ ನಂತರ ಆರ್ ಟಿ-ಪಿಸಿಆರ್ ಪರೀಕ್ಷೆ ಮಾಡಿಸಿ ವರದಿ ನೆಗಟಿವ್ ಬಂದಲ್ಲಿ ಬುಧವಾರದಿಂದ ಎಂದಿನಂತೆ ನನ್ನ ಕಾರ್ಯ-ಕಲಾಪಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ನನಗೆ ಇದುವರೆಗೂ ಪಾಸಿಟಿವ್ ಬಂದಿಲ್ಲ:
ಇತ್ತೀಚೆಗಷ್ಟೇ ಮಾಧ್ಯಮಗಳ ಮುಂದೆ ಮಾತನಾಡುತ್ತಿದ್ದ ಆರೋಗ್ಯ ಸಚಿವ ಡಾ. ಸುಧಾಕರ್, ‘ರಾಜ್ಯದಲ್ಲಿ ಕೋವಿಡ್-19 ಸೋಂಕು ಆರಂಭವಾದಾಗಿನಿಂದ ಹಲವು ಬಾರಿ ಪರೀಕ್ಷೆಗೆ ಒಳಗಾಗಿದ್ದೇನೆ. ಆದರೆ, ಇದುವರೆಗೂ ನನಗೆ ಪಾಸಿಟಿವ್ ಬಂದಿಲ್ಲ. ನನ್ನ ಕುಟುಂಬದ ಹಲವರಿಗೆ ಸೋಂಕು ತಗುಲಿದ್ದರೂ ಸಹ ದೇವರ ಆಶೀರ್ವಾದ, ಜನರ ಆಶೀರ್ವಾದದಿಂದ ನಾನು ಆರೋಗ್ಯವಾಗಿಯೇ ಇದ್ದೇನೆ’ ಎಂದು ತಿಳಿಸಿದ್ದರು.
ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಅವರ ಪ್ರಾಥಮಿಕ ಸಂಪರ್ಕಿತನಾದ್ದರಿಂದ ನಾನು ಎರಡು ದಿನಗಳ ಕಾಲ ಸ್ವಯಂ ಪ್ರೇರಿತನಾಗಿ ಐಸೋಲೇಶನ್ ಗೆ ಒಳಪಡುತ್ತಿದ್ದೇನೆ. ಇಂದು ಸಂಜೆ ಮಾಡಿಸಿದ Abott ID NOW ಪರೀಕ್ಷೆಯಲ್ಲಿ ನೆಗಟಿವ್ ಬಂದಿದ್ದು, 2 ದಿನಗಳ ನಂತರ RT-PCR ಪರೀಕ್ಷೆಗೆ ಒಳಪಡಲಿದ್ದೇನೆ.
1/3
— Dr Sudhakar K (@mla_sudhakar) January 10, 2022