ಬೆಂಗಳೂರು : ಹೋಟೆಲ್ ಹಿಂಭಾಗದ ಖಾಲಿ ಜಾಗದಲ್ಲಿ ತೆರೆದ ಕೊಳಚೆ ನೀರಿನ ಗುಂಡಿಗೆ 8 ವರ್ಷದ ಬಾಲಕ ಬಿದ್ದು ಅಸುನೀಗಿದ್ದಾನೆ. ಬಿಹಾರ ಮೂಲದ ಸಂಜಯ ಕುಮಾರ್ ಪುತ್ರ ಮನೀಶ್ ಕುಮಾರ್ (8) ಮೃತಪಟ್ಟ ಬಾಲಕ. ಹೂಡಿಯಲ್ಲಿ ನೆಲೆಸಿರುವ ಸಂಜಯ್ಕುಮಾರ್ ಬ್ಯಾಂಕ್ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ.
ಬೆಳಗ್ಗೆ ಕೆಲಸಕ್ಕೆ ತೆರಳುವಾಗ ಮನೀಶ್ನನ್ನು ಜತೆಯಲ್ಲಿ ಕರೆದುಕೊಂಡು ಬಂದಿದ್ದರು. ಬೆಳಗ್ಗೆ 11.30ರಲ್ಲಿ ಮನೀಶ್, ಆಟವಾಡುತ್ತ ಬ್ಯಾಂಕ್ ಪಕ್ಕದ ಹೋಟೆಲೊಂದರ ಹಿಂಭಾಗಕ್ಕೆ ತೆರಳಿದ್ದಾನೆ.
ಹೋಟೆಲ್ನ ತ್ಯಾಜ್ಯ ನೀರಿಗಾಗಿ ಟ್ಯಾಂಕ್ ಮಾದರಿ ಗುಂಡಿ ನಿರ್ಮಿಸಿ ಮೇಲ್ಭಾಗ ಮುಚ್ಚಿರಲಿಲ್ಲ. ಹೀಗಾಗಿ ಆಟವಾಡುತ್ತಿದ್ದ ಮನೀಶ್, ಗೊತ್ತಾಗದೆ ಆಯತಪ್ಪಿ ಗುಂಡಿಗೆ ಬಿದ್ದು ಮುಳುಗಿದ್ದಾನೆ. ಆಟವಾಡುತ್ತಿದ್ದ ಮನೀಶ್, 30 ನಿಮಿಷವಾದರೂ ಎಲ್ಲಿಯೂ ಕಾಣದೆ ಇದ್ದಾಗ ತಂದೆ ಸಂಜಯ್ ಕುಮಾರ್, ಬ್ಯಾಂಕ್ ಸುತ್ತ ಹುಡುಕಾಡಿದ್ದರು. ಹೋಟೆಲ್ ಹಿಂಭಾಗ ಹುಡುಕಾಟ ನಡೆಸಿದಾಗ ಅಲ್ಲಿನ ತೆರೆದ ಗುಂಡಿಯಲ್ಲಿ ಮನೀಶ್ ಕುಮಾರ್ ಶವ ಪತ್ತೆಯಾಗಿದೆ.
ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ಹೋಟೆಲ್ ಮಾಲೀಕನ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.