ಬೆಂಗಳೂರು, ಮೇ 31: ಕೇಸರಿ ಧ್ವಜವು ಭವಿಷ್ಯದಲ್ಲಿ ದೇಶದ ರಾಷ್ಟ್ರಧ್ವಜವಾಗಬಹುದು ಎಂದು ಕರ್ನಾಟಕದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮತ್ತೊಮ್ಮೆ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ.
ಈಶ್ವರಪ್ಪ ಮಾತನಾಡಿ, “ಈ ನಾಡಿನಲ್ಲಿ ಹಿಂದಿನಿಂದಲೂ ಕೇಸರಿ ಧ್ವಜಕ್ಕೆ ಗೌರವವಿದೆ, ಅದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ, ಕೇಸರಿ ಧ್ವಜ ತ್ಯಾಗ ಬಲಿದಾನದ ಸಂಕೇತವಾಗಿದೆ, ಅದನ್ನು ಮೈಗೂಡಿಸಿಕೊಳ್ಳಲು ಆರ್ ಎಸ್ ಎಸ್ ಕಚೇರಿಯಲ್ಲಿ ಕೇಸರಿ ಧ್ವಜದ ಮುಂದೆ ಪ್ರಾರ್ಥಿಸುತ್ತೇವೆ.
ನಮ್ಮಲ್ಲಿ ಮೌಲ್ಯಗಳಿವೆ, ಕೇಸರಿ ಧ್ವಜ ಮುಂದೊಂದು ದಿನ ಈ ದೇಶದಲ್ಲಿ ರಾಷ್ಟ್ರಧ್ವಜವಾಗಬಹುದು, ಅದರಲ್ಲಿ ಯಾವುದೇ ಸಂದೇಹವಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.
“ಕಾಂಗ್ರೆಸ್ನವರು ಹೇಳಿದಾಗಲೆಲ್ಲಾ ನಾವು ತ್ರಿವರ್ಣ ಧ್ವಜವನ್ನು ಹಾರಿಸಬೇಕಾಗಿಲ್ಲ. ನಮ್ಮ ಸಂವಿಧಾನದ ಪ್ರಕಾರ ತ್ರಿವರ್ಣ ಧ್ವಜ ರಾಷ್ಟ್ರಧ್ವಜವಾಗಿದೆ ಮತ್ತು ಅದಕ್ಕೆ ಗೌರವವನ್ನು ನಾವು ನೀಡುತ್ತೇವೆ” ಎಂದು ಹೇಳಿದರು.