ಬೆಂಗಳೂರು: ಕೆಲವು ಶಾಸಕರ ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿಲ್ಲದಿರುವ ಕಾರಣದಿಂದಾಗಿ ಅದನ್ನು ಪರಿಶೀಲಿಸಲು ಕಾಲಾವಕಾಶ ಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ಅವರು ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಂಡಾಯ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಇಂದು ವಿಚಾರಣೆ ನಡೆಸಿದ್ದ ನ್ಯಾಯಾಲಯವು ಸಂಜೆಯೊಳಗೆ ಬಂಡಾಯ ಶಾಸಕರ ರಾಜೀನಾಮೆ ಸ್ವೀಕರಿಸಲು ಸ್ವೀಕರ್ ಅವರಿಗೆ ಆದೇಶಿಸಿತ್ತು.
ರಾಜೀನಾಮೆ ವಿಚಾರದಲ್ಲಿ ಕಾನೂನನ್ನು ಮೀರಲಾರೆ. ಎಲ್ಲರ ವಾದ ಆಲಿಸಿರುವೆ. ಅದನ್ನು ವಿಡಿಯೋ ಚಿತ್ರೀಕರಣ ಕೂಡ ಮಾಡಿದ್ದೇನೆ. ಎಲ್ಲವನ್ನು ನಾಳೆ ಕೋರ್ಟ್ ಗೆ ಸಲ್ಲಿಸುತ್ತೇನೆ ಎಂದು ರಮೇಶ್ ಕುಮಾರ್ ಹೇಳಿದರು.
ರಾಜೀನಾಮೆ ವಿಚಾರದಲ್ಲಿ ನಾನು ವಿಳಂಬ ಮಾಡುತ್ತಿದ್ದೇನೆ ಎನ್ನುವ ಮಾತು ಕೇಳಿ ತುಂಬಾ ನೋವಾಗಿದೆ. ರಾಜೀನಾಮೆ ಹೀಗೆ ಇರಬೇಕು ಎಂಬ ಕಾನೂನಿದೆ. ಆದರೆ ಕೆಲವು ಶಾಸಕರ ರಾಜೀನಾಮೆ ಕ್ರಮಬದ್ಧವಾಗಿರಲಿಲ್ಲ. ಇದನ್ನು ಪರಿಶೀಲಿಸಲು ಸಮಯ ಹೇಳಿದ್ದೆ. ಅದನ್ನು ವಿಳಂಬ ಎನ್ನುವುದು ಸರಿಯಲ್ಲ ಎಂದರು.