ಬೆಂಗಳೂರು: ನಮ್ಮ ಮನವಿಗೆ ಮನ್ನಿಸಿ, ಕನ್ನಡದ ಹಿರಿಯ ಕಟ್ಟಾಳುಗಳು ಕರ್ನಾಟಕ ಬಂದ್ ಕರೆಯನ್ನು ಹಿಂಪಡೆದಿದ್ದಾರೆ. ಬಂದ್ ಇರುವುದಿಲ್ಲ. ವ್ಯಾಪಾರ-ವ್ಯವಹಾರ ಹಾಗೂ ಜನರ ಓಡಾಟಕ್ಕೆ ಯಾವುದೇ ತೊಂದರೆ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕನ್ನಡದ ಹಿರಿಯ ಕಟ್ಟಾಳು ವಾಟಾಳ್ ನಾಗರಾಜ್, ಪ್ರವೀಣ್ ಶೆಟ್ಟಿ, ಕೆ.ಆರ್. ಕುಮಾರ್, ಶಿವಲಿಂಗೇಗೌಡ ಸಾ.ರಾ. ಗೋವಿಂದ್, ಶಿವರಾಮೆ ಗೌಡ ಅವರ ಜೊತೆಗೆ ಮಾತನಾಡಿದ್ದೇನೆ. ಅವರು ಡಿ. 31ರಂದು ಕರ್ನಾಟಕ ಬಂದ್ ಗೆ ಕರೆ ಕೊಟ್ಟಿದ್ದರು. ನಿನ್ನೆಯೂ ಅವರೊಂದಿಗೆ ವಿನಂತಿ ಮಾಡಿದ್ದೆ. ಅವರು ಇಲ್ಲಿ ಬಂದು ಮಾತಾಡಿ, ಅನೇಕ ವಿಚಾರಗಳನ್ನು ಚರ್ಚಿಸಿದ್ದೇವೆ ಎಂದರು.
ಕನ್ನಡವನ್ನು ಉಳಿಸುವುದರಲ್ಲಿ, ಕರ್ನಾಟಕದ ಗಡಿ ಉಳಿಸುವುದರಲ್ಲಿ ನಾವೆಲ್ಲ ಒಂದು ಇದ್ದೇವೆ ಎಂದು ಹೇಳಿದ್ದೇನೆ. ಅವರು ಮುಂದೆ ಕನ್ನಡದ ರಕ್ಷಣೆ ಹೇಗೆ ಮಾಡಬೇಕೆಂದು ಹಲವಾರು ವಿಚಾರಗಳನ್ನು ತಿಳಿಸಿದ್ದಾರೆ. ಯಾವುದೇ ಸಂದರ್ಭದಲ್ಲಿ ಕನ್ನಡದ ರಕ್ಷಣೆಗೆ ನಮ್ಮ ಸರಕಾರ ಗಟ್ಟುಯಾಗಿ ನಿಂತಿರುತ್ತದೆ ಎಂಬ ಭರವಸೆಯನ್ನು ಕೊಟ್ಟಿದ್ದೇನೆ ಎಂದು ಸಿಎಂ ತಿಳಿಸಿದರು.
ಎಂಇಎಸ್ ಸಂಘಟನೆಗಳ ನಿಷೇಧಕ್ಕೆ ಸಂಬಂಧಿಸಿ ಕಾನೂನು ಪ್ರಕಾರ ಪರಿಶೀಲನೆ ಮಾಡುತ್ತೇನೆ. ಇದೇ ವಿಚಾರವನ್ನು ಕನ್ನಡ ಪರ ಸಂಘಟನೆಗಳಿಗೂ ಮನದಟ್ಟು ಮಾಡಿ ಕೊಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.