ಬೆಂಗಳೂರು: 67ನೇ ಗಣ ರಾಜ್ಯೋತ್ಸವ ಹಿನ್ನೆಲೆಯಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ದೇಶದ ಅತ್ಯಂತ ಉನ್ನತ ನಾಗರಿಕ ಪದ್ಮ ಪ್ರಶಸ್ತಿ ಪ್ರಕಟಿಸಲಾಗಿದೆ.
ಈ ಬಾರಿ 10 ಪದ್ಮವಿಭೂಷಣ, 19 ಪದ್ಮಭೂಷಣ, 83 ಪದ್ಮಶ್ರೀ ಸೇರಿ ಒಟ್ಟು 112 ಪದ್ಮ ಪ್ರಶಸ್ತಿ ಪ್ರಕಟಿಸಲಾಗಿದೆ. ಈ ಪೈಕಿ 11 ಪದ್ಮ ಪ್ರಶಸ್ತಿಗಳು ಕರ್ನಾಟಕಕ್ಕೆ ಸಂದಿವೆ. ಅಲ್ಲದೆ, ಕರ್ನಾಟಕದ ನಂಟು ಹೊಂದಿರುವ ಮೂವರು ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರಾಪ್ತವಾಗಿದೆ.
ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀಶ್ರೀ ರವಿಶಂಕರ್ ಗುರೂಜಿ, ಖ್ಯಾತ ವಿಜ್ಞಾನಿ ಡಾ.ವಿ.ಕೆ.ಅತ್ರೆ ಅವರಿಗೆ ಪದ್ಮವಿಭೂಷಣ ಲಭಿಸಿದೆ. ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ, ಮೂಲತಃ ರಾಯಚೂರಿನವರಾದ ಸೂಪರ್ ಹಿಟ್ “ಬಾಹುಬಲಿ’ ಚಿತ್ರದ ನಿರ್ದೇಶಕ ಎಸ್.ಎಸ್.ರಾಜಮೌಳಿ, ಖ್ಯಾತ ಹಿಂದುಸ್ತಾನಿ ಗಾಯಕ ಎಂ.ವೆಂಕಟೇಶ್ ಕುಮಾರ್, ಹುಬ್ಬಳ್ಳಿಯ ಖ್ಯಾತ ನೇತ್ರತಜ್ಞ ಡಾ.ಎಂ.ಎಂ.ಜೋಶಿ, ಬೆಂಗಳೂರಿನ ಮೂಳೆತಜ್ಞ ಡಾ.ಜಾನ್ ಎಬ್ನೇಜರ್, ಪ್ರಧಾನಿ ನರೇಂದ್ರ ಮೋದಿ ಅವರ ಯೋಗಗುರು ಡಾ.ಎಚ್.ಆರ್.ನಾಗೇಂದ್ರ, ಇಸ್ರೋ ವಿಕಾನಿ ಡಾ.ಎಂ.ಅಣ್ಣಾದೊರೈ, ಐಐಎಸ್ಸಿ ವಿಜ್ಞಾನಿ ದೀಪಂಕರ ಚಟರ್ಜಿ ಮತ್ತು ಮಧ್ಯಾಹ್ನದ ಬಿಸಿಯೂಟ “ಅಕ್ಷಯಪಾತ್ರಾ’ ಖ್ಯಾತಿಯ ಬೆಂಗಳೂರು ಇಸ್ಕಾನ್ ಮುಖ್ಯಸ್ಥ ಮಧುಪಂಡಿತ ದಾಸ್ ಅವರು ಕರ್ನಾಟಕದ ಪದ್ಮಶ್ರೀ ವಿಜೇತರು. ಬೆಂಗಳೂರು ಮೂಲದವರಾದ ತಮಿಳಿನ ಸೂಪರ್ಸ್ಟಾರ್ ರಜನೀಕಾಂತ್ ಅವರಿಗೆ ಪದ್ಮವಿಭೂಷಣ, ಹೈದರಾಬಾದ್ ಮೂಲದವರಾದರೂ ಬೆಂಗಳೂರಿನಲ್ಲಿ ನೆಲೆಸಿರುವ ಬ್ಯಾಡ್ಮಿಂಟನ್ ಪಟು ಸೈನಾ ನೆಹ್ವಾಲ್ಗೆ ಪದ್ಮಭೂಷಣ ಮತ್ತು ಮೈಸೂರಲ್ಲಿ ಜನಿಸಿದ ದಿಲ್ಲಿ ನಿವಾಸಿ, ಖ್ಯಾತ ನೃತ್ಯಪಟು ಪ್ರತಿಭಾ ಪ್ರಹ್ಲಾದ್ ಅವರಿಗೆ ಪದ್ಮಶ್ರೀ ಗೌರವ ಸಂದಿದೆ.