ಬೆಂಗಳೂರು : ನಗರದ ಕಂಠೀರವ ಕ್ರೀಡಾಂಗಣ ಇನ್ನು ಮುಂದೆ ಅಥ್ಲೆಟಿಕ್ಸ್ಗೆ ಮಾತ್ರ ಸೀಮಿತ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಸ್ಪಷ್ಟಪಡಿಸಿದರು.
ಕ್ರೀಡಾಂಗಣದಲ್ಲಿ ಅಳವಡಿಸಿರುವ ಸಿಂಥೆಟಿಕ್ ಟ್ರ್ಯಾಕ್ ಪರಿಶೀಲಿಸಿದ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ‘ಇದು ಬಹೂಪಯೋಗಿ ಕ್ರೀಡಾಂಗಣವಲ್ಲ. ಆದ್ದರಿಂದ ಅಥ್ಲೆಟಿಕ್ಸ್ ಅಲ್ಲದೆ ಬೇರೆ ಯಾವ ಕ್ರೀಡೆಗೂ ಇಲ್ಲಿ ಅವಕಾಶವಿಲ್ಲ. ಇಲ್ಲಿ ಇನ್ನು ಫುಟ್ಬಾಲ್ ಆಡಲು ಬಿಡುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
ಕಂಠೀರವ ಕ್ರೀಡಾಂಗಣದಲ್ಲಿ ಐಎಸ್ಎಲ್ ಪಂದ್ಯಗಳನ್ನು ನಡೆಸಬಾರದು ಎಂದು ಆಗ್ರಹಿಸುತ್ತ ಬಂದಿರುವ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ಕಾರ್ಯದರ್ಶಿ ಎ.ರಾಜವೇಲು ‘ಫುಟ್ ಬಾಲ್ಗೆ ಅದರದೇ ಆದ ಕ್ರೀಡಾಂಗಣ ಇರುವುದರಿಂದ ಇಲ್ಲಿ ಇನ್ನು ಮುಂದೆ ಫುಟ್ಬಾಲ್ ಟೂರ್ನಿಗಳನ್ನು ಆಡಲು ಬಿಡಬಾರದು’ ಎಂದರು.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬೆಂಗಳೂರು ಫುಟ್ಬಾಲ್ ಕ್ಲಬ್ನ ಸಿಇಒ ಮಂದಾರ್ ತಮ್ಹಾನೆ ‘ಅಧಿಕೃತವಾಗಿ ವಿಷಯ ತಿಳಿದಿಲ್ಲ. ಆದ್ದರಿಂದ ಏನೂ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.
ಅಥ್ಲೀಟ್ಸ್ಗೆ ಮುಕ್ತ
ಸಿಂಥೆಟಿಕ್ ಟ್ರ್ಯಾಕ್ ಶೀಘ್ರದಲ್ಲೇ ಬಳಕೆಗೆ ಮುಕ್ತವಾಗಲಿದೆ ಎಂದು ಸಚಿವರು ತಿಳಿಸಿದರು.
‘ಕಾಮಗಾರಿಗೆ ಒಟ್ಟು ₹ ಐದು ಕೋಟಿ ವೆಚ್ಚವಾಗಿದೆ. ಖೇಲೊ ಇಂಡಿಯಾ ಸೇರಿದಂತೆ ವಿವಿಧ ಕ್ರೀಡಾಕೂಟಗಳು ಇನ್ನು ಇಲ್ಲಿಯೇ ನಡೆಯಲಿವೆ. ಏಪ್ರಿಲ್ನಲ್ಲಿ ಉದ್ಘಾಟನೆ ಆಗಲಿದೆ’ ಎಂದರು.
ರಾಜ್ಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಕೆ. ಗೋವಿಂದರಾಜ್, ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.