ಬೆಂಗಳೂರು: ಐಐಎಸ್ಸಿ (ಭಾರತೀಯ ವಿಜ್ಞಾನ ಸಂಸ್ಥೆ) ಮೇಲೆ ನಡೆದಿದ್ದ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ಹಬೀಬ್ ಮಿಯಾನನ್ನು (34) ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಕರ್ನಾಟಕ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಹಾಗೂ ಸಿಸಿಬಿ ಪೊಲೀಸರು, ಗುಜರಾತ್ ಪೊಲೀಸರಿಂದ ವಶಕ್ಕೆ ಪಡೆದಿದ್ದ ಆತನನ್ನು ಮಾರ್ಚ್ 19ರಂದು ರಾಜ್ಯಕ್ಕೆ ಕರೆತಂದಿದ್ದು, ನ್ಯಾಯಾಲಯದ ನಿರ್ದೇಶನದಂತೆ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ಮುಗಿದಿದ್ದರಿಂದ ಹಬೀಬ್ನನ್ನು ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬಳಿಕ ನ್ಯಾಯಾಧೀಶರು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದರು.
ಎಟಿಎಸ್ ಅಧಿಕಾರಿಯೊಬ್ಬರು ತಿಳಿಸಿದ ಪ್ರಕಾರ ‘ಪ್ರಕರಣದ ಆರೋಪಿಗಳಿಗೆ ಸಹಕರಿಸಿದ್ದಾಗಿ ಹಬೀಬ್ ಲಿಖಿತವಾಗಿ ಒಪ್ಪಿಕೊಂಡಿದ್ದಾನೆ. ವಿಚಾರಣೆ ಮುಕ್ತಾಯಗೊಳಿಸಿ ಆತನನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದೇವೆ’ ಎಂದಿದ್ದಾರೆ.
ರಾಜ್ಯಕ್ಕೆ ಗುಜರಾತ್ ಪೊಲೀಸರ ಭೇಟಿ: ಗುಜರಾತ್ನಲ್ಲೂ ಶಂಕಿತ ಹಬೀಬ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು, ಆತನನ್ನು ವಶಕ್ಕೆ ಪಡೆಯಲು ಅಲ್ಲಿಯ ಪೊಲೀಸರು ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆ ಇದ್ದು, ಗುಜರಾತ್ ಪೊಲೀಸರು ಹಬೀಬ್ನನ್ನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದು, ಬಾಡಿ ವಾರಂಟ್ ಮೂಲಕ ಆರೋಪಿಯನ್ನು ವಶಕ್ಕೆ ಪಡೆದಿದ್ದೆವು. ಆತನ ವಿಚಾರಣೆ ಮುಗಿದಿರುವ ಬಗ್ಗೆ ಗುಜರಾತ್ ಪೊಲೀಸರಿಗೆ ತಿಳಿಸಿದ್ದೇವೆ. ಅಗತ್ಯ ಬಿದ್ದಾಗ ರಾಜ್ಯಕ್ಕೆ ಬಂದು ಆತನನ್ನು ವಶಕ್ಕೆ ಪಡೆಯುತ್ತೇವೆ ಎಂದು ಅಲ್ಲಿಯ ಪೊಲೀಸರು ತಿಳಿಸಿದ್ದಾರೆ’ ಎಂದು ಎಟಿಎಸ್ ಅಧಿಕಾರಿ ಹೇಳಿದರು.