ಬೆಂಗಳೂರು,ಡಿ.31 : ಕೋವಿಡ್ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಸೂಚಿಸಿದ್ದು, ಇಂದು ಸಂಜೆ 6 ಗಂಟೆಯಿಂದಲೇ ಪೊಲೀಸರು ನಗರದ ಆಯಕಟ್ಟಿನ ಜಾಗ ಗಳೂ ಸೇರಿದಂತೆ ಎಲ್ಲೆಡೆ ಬಿಗಿಭದ್ರತೆ ಆಯೋಜಿ ಸಲಾಗಿದೆ.
ಪ್ರಮುಖವಾಗಿ ಪ್ರತಿ ವರ್ಷ ಅದ್ಧೂರಿ ವರ್ಷಾ ಚರಣೆ ನಡೆಯುವ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ, ಕೋರಮಂಗಲ ಸೇರಿದಂತೆ ಆಯಕಟ್ಟಿನ ಜಾಗಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ನಗರಪೊಲೀಸ್ ಆಯುಕ್ತ ಕಮಲಪಂಥ್ ಅವರು ಇಂದು ಸಂಜೆ 6 ಗಂಟೆಯಿಂದ ನಾಳೆ ಬೆಳಗ್ಗೆ 5 ಗಂಟೆವರೆಗೂ ನಗರದಾದ್ಯಂತ ನಿಷೇಧಾಜ್ಞೆ ಹೊರಡಿಸಿ ಆದೇಶಿಸಿದ್ದಾರೆ. ಇದರ ಪ್ರಕಾರ 5ಕ್ಕಿಂತ ಹೆಚ್ಚು ಜನ ಎಲ್ಲಿಯೂ ಸಮಾವೇಶಗೊಳ್ಳುವಂತಿಲ್ಲ. ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆ ಮಾಡಲು ಅವಕಾಶವಿಲ್ಲ. ಪಾರ್ಕ್, ಮೈದಾನ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲಾಗಿದೆ.
ಜನವಸತಿ ಸಂಕೀರ್ಣ, ಖಾಸಗಿ ಕ್ಲಬ್ಗಳಲ್ಲಿ ಅದರ ನಿವಾಸಿಗಳು ಮತ್ತು ಸದಸ್ಯರು ಯಾವುದೇ ಸಂಘಟನಾತ್ಮಕ ಚಟುವಟಿಕೆಗಳಿಲ್ಲದೆ ಹೊಸ ವರ್ಷಾಚರಣೆ ಮಾಡಬಹುದಾಗಿದೆ. ಹೋಟೆಲ್, ಮಾಲ್, ರೆಸ್ಟೋರೆಂಟ್, ಕ್ಲಬ್, ಪಬ್, ಕ್ಲಬ್ಹೌಸ್ ಅಥವಾ ಇನ್ನಿತರ ಸ್ಥಳಗಳಲ್ಲಿ ಡಿಜೆ ಹಾಕುವುದು, ಕಾರ್ಯಕ್ರಮ ಆಯೋಜಿಸುವುದು, ಪ್ರದರ್ಶನಗಳು ಮತ್ತಿತರ ಆಚರಣೆಗಳಿಗೆ ಕಡಿವಾಣವಿದೆ. ಸಂಗೀತ ರಸಸಂಜೆ, ನೃತ್ಯ ಇತರ ಪಾರ್ಟಿಗಳಿಗೂ ಅವಕಾಶವಿಲ್ಲ.
ಆದರೆ ಅನುಮತಿ ಪಡೆದ ಪ್ರಮಾಣದಲ್ಲಿ ಸಂಗೀತದೊಂದಿಗೆ ಯಾಂತ್ರಿಕ ವ್ಯವಹಾರಗಳನ್ನು ನಡೆಸಲು ಅವಕಾಶವಿದೆ. ಆದರೆ ಹೋಟೆಲ್, ಮಾಲ್, ಪಬ್, ರೆಸ್ಟೋರೆಂಟ್ಗಳು ಕೋವಿಡ್ ಶಿಷ್ಟಾಚಾರಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ನಾಗರಿಕ ಸುರಕ್ಷತೆಗೆ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಬೇಕು, ಪೊಲೀಸ್ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಸ್ಥಳೀಯ ಆಡಳಿತ ಅಕಾರಿಗಳು ಕೋವಿಡ್ ಮಾರ್ಗಸೂಚಿಗಳ ಪಾಲನೆ ಮೇಲೆ ನಿಗಾ ಇಡಲಿದ್ದಾರೆ ಎಂದಿದ್ದಾರೆ.
ಯಾರಾದರೂ ನಿಯಮ ಉಲ್ಲಂಘನೆ ಮಾಡಿದ್ದು ಕಂಡುಬಂದರೆ ವಿಪತ್ತು ನಿರ್ವಹಣಾ ಕಾಯ್ದೆ, ಸೆಕ್ಷನ್ 51ರಿಂದ 60ರಡಿ ಕ್ರಮ ಜರುಗಿಸಲಾಗುವುದು ಜೊತೆಗೆ ನಿಷೇಧಾಜ್ಞೆ ನಿಯಮಾವಳಿಗಳ ಅಡಿ ಕೂಡ ಕಾನೂನು ಕ್ರಮ ಜರುಗಿಸುವುದಾಗಿ ಆಯುಕ್ತರು ತಿಳಿಸಿದ್ದಾರೆ.
ಎಚ್ಚರಿಕೆ ಅಗತ್ಯ: ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಮತ್ತು ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೈಟ್ ಕಫ್ರ್ಯೂವನ್ನು ಜಾರಿಗೆ ತಂದಿದೆ. ಹೊಸ ವರ್ಷಾಚರಣೆ ವೇಳೆ ಯುವ ಸಮುದಾಯವೂ ಸೇರಿದಂತೆ ಬಹಳಷ್ಟು ಮಂದಿ ಹದ್ದುಮೀರಿದ ವರ್ತನೆ ಪ್ರದರ್ಶಿಸುವುದು ಸಾಮಾನ್ಯ. ಇದರಿಂದ ಜನ ಸಂದಣಿಯ ನಡುವೆ ಸೋಂಕು ವ್ಯಾಪಿಸಿ ಮತ್ತಷ್ಟು ಅಪಾಯಕಾರಿ ಸನ್ನಿವೇಶಗಳನ್ನು ಸೃಷ್ಟಿಸುವ ಆತಂಕವಿದೆ.
ಈ ಹಿನ್ನೆಲೆಯಲ್ಲಿ ಹೊಸ ವರ್ಷದ ಸಂಭ್ರಮವನ್ನು ಮರೆತು ಪೊಲೀಸರು ಇಂದು ಸಂಜೆಯಿಂದಲೇ ರಸ್ತೆಗಿಳಿದಿದ್ದಾರೆ. ನಗರಾದ್ಯಂತ 500 ಕಡೆ ಬ್ಯಾರಿಕೇಡ್ಗಳನ್ನು ಹಾಕಿ ನಾಕಾಬಂಧಿ ನಡೆಸಲಿದ್ದಾರೆ.