ಬೆಂಗಳೂರು: ಮಾಜಿ ಸಚಿವ ದಿ. ಖಮರುಲ್ ಇಸ್ಲಾಂ ಅವರ ಅಂತ್ಯಕ್ರಿಯೆಯನ್ನು ಸೆ. 19ರಂದು ಕಲಬುರಗಿ ಆನಂದ ನಗರದಲ್ಲಿರುವ ಕಲಂದರ್ ಖಾನ್ ದರ್ಗಾ ಖಬರಸ್ಥಾನದಲ್ಲಿ ರಾತ್ರಿ ಸುಮಾರು 10 ಗಂಟೆಗೆ ಸರ್ಕಾರಿ ಸಕಲ ಗೌರವದೊಂದಿಗೆ ನೆರವೇರಿಸಲಾಗುವುದು ಎಂದು ಅಲ್ಲಿನ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ.
ದಿ. ಖಮರುಲ್ ಇಸ್ಲಾಂ ಅವರ ಪಾರ್ಥಿವ ಶರೀರವು ಬೆಂಗಳೂರಿನಿಂದ ಸೆಪ್ಟೆಂಬರ್ 19ರಂದು ಬೆಳಗಿನ ಜಾವ ತಲುಪಿದ್ದು, ಮನೆಯಲ್ಲಿ ಪರಿವಾರ ಸಮೇತವಾಗಿ ಕೈಗೊಳ್ಳುವ ಧಾರ್ಮಿಕ ಆಚರಣೆ ಮುಗಿದ ನಂತರ ಜಿಲಾನಾಬಾದ, ಮಿಸಬಾ ನಗರ ವೃತ್ತ, ಆಳಂದ ಚೆಕ್ಪೋಸ್ಟ್, ತಾಜ್ ನಗರ, ಹುಮನಾಬಾದ ಸರ್ಕಲ್, ಮಿಲ್ಲತ ನಗರ ಮಾರ್ಗವಾಗಿ ಕೆ.ಸಿ.ಟಿ. ಕಾಲೇಜಿನ ಮೈದಾನಕ್ಕೆ ಪಾರ್ಥಿವ ಶರೀರವನ್ನು ತರಲಾಗುವುದು. ಬೆಳಗಿನ 10.30ರಿಂದ ಸಂಜೆ 5 ಗಂಟೆಯವರೆಗೆ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಸಂಜೆ 5.45 ಗಂಟೆಗೆ ಕೆ.ಸಿ.ಟಿ. ಕಾಲೇಜು ಮೈದಾನದಲ್ಲಿ ಮುಸ್ಲಿಂ ಧರ್ಮದ ಪ್ರಕಾರ ನಮಾಜ ಮತ್ತು ವಿಧಿ ವಿಧಾನಗಳನ್ನು ಪೂರ್ಣಗೊಳಿಸಿ, ದಿ. ಖಮರುಲ್ ಇಸ್ಲಾಂ ಅವರ ಪಾರ್ಥಿವ ಶರೀರವನ್ನು ಸರ್ಕಾರಿ ಗೌರವದೊಂದಿಗೆ ಮಹ್ಮದ ರಫೀಕ್ ಚೌಕ್, ಬಿಬಿ ರೋಜಾ ಕಾಲೇಜು, ಫರಾನ್ ಕಾಲೇಜು, ಮುಸ್ಲಿಂ ಚೌಕ್, ಗಂಜ್, ಹುಮನಾಬಾದ್ ಬೇಸ್, ಸುಪರ ಮಾರ್ಕೇಟ್, ಜಗತ್ ಸರ್ಕಲ್, ಎಸ್.ವಿ.ಪಿ. ಚೌಕ್, ಕೋರ್ಟ ರಸ್ತೆ ಮಾರ್ಗವಾಗಿ ಕಲಂದರ ಖಾನ್ ದರ್ಗಾ ಖಬರಸ್ಥಾನಕ್ಕೆ ಆಗಮಿಸಿ ರಾತ್ರಿ 10 ಗಂಟೆಗೆ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದ ಪೊಲೀಸ್ ಬಲವಿದೆ. ದಿ. ಖಮರುಲ್ ಇಸ್ಲಾಂ ಅವರ ಅಂತ್ಯಸಂಸ್ಕಾರದ ವೇಳೆ ಗಣ್ಯರಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು. ಹೆಚ್ಚಿನ ಪೊಲೀಸರ ಅವಶ್ಯಕತೆಯಿದ್ದಲ್ಲಿ ನೆರೆ ಜಿಲ್ಲೆಯ ಸಹಾಯ ಪಡೆಯಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಹೇಳಿದ್ದಾರೆ.