ಬೆಂಗಳೂರು, ಮೇ.14: ಬೆಂಗಳೂರಲ್ಲಿ ಯುವತಿಯ ಮೇಲೆ ಆಯಸಿಡ್ ದಾಳಿ ನಡೆಸಿದ ಆರೋಪಿ ನಾಗೇಶ್ನನ್ನು ಬಂಧಿಸಿ ಕರ್ನಾಟಕಕ್ಕೆ ಕರೆತರಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್, ಪೊಲೀಸರಿಗೆ ಸಿಗದೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಆರೋಪಿ ನಾಗೇಶ್ನನ್ನು ನಿನ್ನೆ ಬಂಧಿಸಲಾಗಿದೆ. ಆರೋಪಿಯನ್ನು ಹಿಡಿದ ಪೊಲೀಸರಿಗೆ 5 ಲಕ್ಷ ರೂಪಾಯಿ ಬಹುಮಾನ ಧನ ನೀಡೋದಾಗಿ ಕಮಲ್ ಪಂತ್ ಹೇಳಿದ್ದಾರೆ.
ಈ ಒಂದು ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲು ಕಳೆದ 15 ದಿನಗಳಿಂದ ಸುಮಾರು ನೂರಕ್ಕೂ ಹೆಚ್ಚು ಪೊಲೀಸರು ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಅಲ್ಲದೇ 50 ಮಂದಿ ಪೊಲೀಸ್ ಅಧಿಕಾರಿಗಳು ಎಲ್ಲೆಡೆ ಓಡಾಡುವ ಮೂಲಕ ಹಾಗೂ ತನಿಖೆಯ ಸಂಪೂರ್ಣ ಹುಡುಕಾಟವನ್ನು ಮಾಡಲು ಸತತವಾಗಿ ಕೆಲಸ ಮಾಡುತ್ತಿದ್ದರು. ಅವರ ಪರಿಶ್ರಮಕ್ಕೆ 5 ಲಕ್ಷ ರೂ.ಗಳನ್ನೂ ಅಭಿನಂದನೆಯ ರೂಪದಲ್ಲಿ ನೀಡಲಾಗುತ್ತದೆ ಎಂದು ಕಮಲ್ ಪಂತ್ ತಿಳಿಸಿದರು.
ನಾಗೇಶ್ ಎಂಬಾತ ಏಪ್ರಿಲ್ 28ರಂದು ಯುವತಿಯ ಮೇಲೆ ಆಯಸಿಡ್ ದಾಳಿ ನಡೆಸಿ ತಲೆಮರೆಸಿಕೊಂಡಿದ್ದ, ಕಾಮಾಕ್ಷಿಪಾಳ್ಯ ಪೊಲೀಸರು ತಮಿಳುನಾಡಿನ ತಿರುವಣ್ಣಾಮಲೈ ಆಶ್ರಮದಲ್ಲಿ ಶುಕ್ರವಾರ ಸಂಜೆ ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ. ಆರೋಪಿಯ ಮೇಲೆ ಎಂಟು ದಿನಗಳ ಒಳಗೆ ಚಾರ್ಜ್ಶೀಟ್ ಹಾಕಲಾಗುವುದು. ಆದಷ್ಟು ಬೇಗ ಯುವತಿಗೆ ನ್ಯಾಯ ದೊರಕಿಸುವ ಕೆಲಸ ಮಾಡಲಾಗುವುದೆಂದು ಹೇಳಿದರು.
ನಾಗೇಶ್ ಆಯಸಿಡ್ ದಾಳಿ ನಡೆಸಿ ತಕ್ಷಣ ಅವನ ಸ್ನೇಹಿತ ಹಾಗೂ ಅಣ್ಣನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಅವ್ರು ಪೊಲೀಸರಿಗೆ ಶರಣಾಗುವಂತೆ ಹೇಳಿದ್ದಾರೆ. ಆದ್ರೆ ನಾಗೇಶ್ ಯಾರ ಮಾತನ್ನು ಕೇಳದೆ ಅಲ್ಲಿಂದ ನೇರವಾಗಿ ತಿರುವಣ್ಣಾಮಲೈ ಆಶ್ರಮಕ್ಕೆ ಹೋಗಿ ಕಾವಿ ಬಟ್ಟೆ ತೊಟ್ಟು ಸ್ವಾಮೀಜಿ ಅಂತಾ ಪೂಜೆ ಹಾಗೂ ಧ್ಯಾನದಲ್ಲಿ ಮಗ್ನನಾಗಿದ್ದ ಎಂದು ಕಮಲ್ ಪಂತ್ ಮಾಹಿತಿ ನೀಡಿದರು.
ಆರೋಪಿ ಸೆರೆಗೆ ಎಲ್ಲಾ ಕಡೆಗಳಲ್ಲಿ ಅವನ ಚಿತ್ರಗಳನ್ನು ಆಂಟಿಸಲಾಗಿತ್ತು. ಅದರಂತೆಯೇ ತಿರುವಣ್ಣಾಮಲೈ ಆಶ್ರಮದಲ್ಲಿ ಇದ್ದ ಕಾರಣ ಅದನ್ನು ಗಮನಿಸಿದ ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅವರು ನೀಡಿದ ಮಾಹಿತಿ ಹಾಗೂ ಚಿತ್ರದ ಆಧಾರದಲ್ಲಿ ತಕ್ಷಣ ಸಮೀಪದಲ್ಲಿಯೇ ಇದ್ದ ಪೊಲೀಸರು ಸ್ಥಳಕ್ಕೆ ತೆರಳಿ ನೋಡಿದಾಗ ಅವನನ್ನು ಆರೋಪಿ ನಾಗೇಶ್ ಎಂದು ಖಚಿತಪಡಿಸಿಕೊಂಡು ಆತನನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು.
ಕಳೆದ ಏಳು ವರ್ಷಗಳ ಹಿಂದೆ ಇಬ್ಬರು ಒಂದೇ ಕಟ್ಟಡದಲ್ಲಿ ವಾಸವಾಗಿದ್ದು, ಪ್ರೀತಿಸುವುದಾಗಿ ಯುವತಿಯನ್ನು ಪೀಡಿಸುತ್ತಿದ್ದ. ಆ ವಿಷಯವನ್ನು ಯುವತಿ ಮನೆಯವರೆಗೆ ತಿಳಿಸಿದಾಗ ಅವರು ಅವನನ್ನು ಅಲ್ಲಿಂದ ಹೊರ ಹೋಗುವಂತೆ ಒತ್ತಾಯಿಸಿದರು. ಆನಂತರವೂ ಸ್ನೇಹಿತನ ಸಹಾಯದಿಂದ ಆಕೆಯನ್ನು ಹಿಂಬಾಲಿಸುತ್ತಲೇ ಇದ್ದ. ಕಳೆದ ಸ್ವಲ್ಪ ದಿನಗಳ ಹಿಂದೆ ಸಂತ್ರಸ್ತೆಯ ಅಕ್ಕನಿಗೆ ಮದುವೆ ನಿಶ್ಚಯವಾಗಿದ್ದು, ಈಕೆಗೂ ಮದುವೆ ಮಾಡುವ ಯೋಚನೆ ಮಾಡುತ್ತಿದ್ದಾರೆ ಎನ್ನುವ ವಿಷಯ ತಿಳಿದು ಮತ್ತೊಂದು ಬಾರಿ ಅವಳನ್ನು ಒಪ್ಪಿಸಲು ಪ್ರಯತ್ನಿಸಿದ್ದಾನೆ. ಅದಕ್ಕೆ ಅವಳು ಖಡಾಖಂಡಿತವಾಗಿ ನಿರಾಕರಿಸಿದಾಗ ಈ ರೀತಿಯ ಕೃತ್ಯ ಎಸಗಿದ್ದಾನೆ.
ಆಯಸಿಡ್ ದಾಳಿಗೊಳಗಾಗಿ ಬರೋಬ್ಬರಿ 16 ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ, ಇದೀಗ ಚೇತರಿಸಿಕೊಂಡಿದ್ದಾಳೆ. ಯುವತಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಐಸಿಯುನಿಂದ ವಾರ್ಡ್ಗೆ ಯುವತಿಯನ್ನು ಶಿಫ್ಟ್ ಮಾಡಲಾಗಿದೆ. ಸ್ಪೆಷಲ್ ಬರ್ನಿಂಗ್ ವಾರ್ಡ್ ಯುವತಿಯನ್ನ ಶಿಫ್ಟ್ ಮಾಡಲಾಗಿದೆ. ಯುವತಿಗೆ ಇನ್ಫೆಕ್ಷನ್ ಆಗದಂತೆ ವೈದ್ಯರ ತಂಡ ನಿರಂತರ ನಿಗಾವಹಿಸಿದ್ದಾರೆ. ಸದ್ಯ ಕುಟುಂಬಸ್ಥರ ಜೊತೆ ಯುವತಿ ಮಾತನಾಡುತ್ತಿದ್ದಾರೆ.