ಬೆಂಗಳೂರು : ನಗರದಲ್ಲಿ ಅಮಾನವೀಯ ಘಟನೆಯೊಂದು ನಡೆದು ಹೋಗಿದ್ದು, ಪತಿಯೇ ತನ್ನ ಪತ್ನಿಯ ಮೇಲೆ ಅತ್ಯಾಚಾರ ನಡೆಸಲು ತಮ್ಮಂದಿರಿಗೆ ಸಾಥ್ ಕೊಟ್ಟ ಪೈಶಾಚಿಕ ಘಟನೆಗೆ ರಾಜಧಾನಿ ಬೆಂಗಳೂರು ಸಾಕ್ಷಿಯಾಗಿದೆ. ಬೆಂಗಳೂರಿನ ಗೋವಿಂದಪುರದಲ್ಲಿ ಈ ಘಟನೆ ನಡೆದಿದ್ದು, ತನಗಾದ ಅನ್ಯಾಯವನ್ನು ಸಂತ್ರಸ್ತೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಸಂತ್ರಸ್ತೆ 2007ರಲ್ಲಿ ಅಬ್ದುಲ್ ನಬಿ ಎಂಬಾತನ ಜೊತೆ ವಿವಾಹವಾಗಿದ್ದರು. ಡೆಲಿವರಿಗೆಂದು ತವರು ಮನೆಗೆ ಹೋಗಿ ಬಂದ ಬಳಿಕ ಅಬ್ದುಲ್ ನಬಿ ತನ್ನ ಹುಚ್ಚಾಟ ಆರಂಭಿಸಿದ್ದಾನೆ. ಮನೆಗೆ ಬರಬೇಕಾದರೆ ಐದು ಲಕ್ಷ ತರುವಂತೆ ಸೂಚನೆ ನೀಡಿದ್ದಾನೆ. ಹಣ ತರಲು ನಿರಾಕರಿಸಿದ್ದಕ್ಕೆ ಸಂತ್ರಸ್ತೆಯನ್ನು ಮನೆಯಿಂದ ಆಚೆ ಹಾಕಿದ್ದಾನೆ. ಸಂತ್ರಸ್ತೆ ಕಳೆದ ಎರಡು ವರ್ಷಗಳಿಂದ ತವರು ಮನೆಯಲ್ಲೇ ಇದ್ದು, ಕಳೆದೆರೆಡು ತಿಂಗಳ ಹಿಂದೆ ಸಂತ್ರಸ್ತೆಗೆ ವಿಚ್ಛೇದನ ನೀಡದೇ ಅಬ್ದುಲ್ ನಬಿ ಬೇರೆ ಮದುವೆಯಾಗಿದ್ದಾನೆ.
ಈ ವಿಚಾರ ತಿಳಿದು ಪ್ರಶ್ನಿಸಲು ಪತಿಯ ಮನೆಗೆ ತೆರಳಿದ್ದ ಸಂತ್ರಸ್ತೆ ಮೇಲೆ ಪತಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಪತ್ನಿಯ ಮೇಲೆ ಅತ್ಯಾಚಾರ ನಡೆಸುವಂತೆ ತನ್ನ ತಮ್ಮಂದಿರಿಗೆ ಸೂಚಿಸಿದ್ದಾನೆ ಎನ್ನಲಾಗಿದೆ. ಅಣ್ಣನ ಮಾತಿಗೆ ಒಪ್ಪಿದ ತಮ್ಮಂದಿರು ತಾಯಿ ಸಮಾನರಾದ ಅತ್ತಿಗೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಘಟನೆ ಸಂಬಂಧ ಗೋವಿಂದಪುರ ಪೊಲೀಸ್ ಠಾಣೆಗೆ ದೂರು ದಾಖಲಾಗಿದ್ದು, ಸದ್ಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.