ಬೆಂಗಳೂರು: ತಿಗಳರಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ನಲಪಾಡ್ ಅಹಮದ್ ಹ್ಯಾರಿಸ್ ಶುಕ್ರವಾರ ಹಿಂದೂ ಭಕ್ತರ ಕ್ಷಮೆಯಾಚಿಸಿದರು.
ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಬೆಂಗಳೂರಿನ ಐತಿಹಾಸಿಕ ಕರಗ ಉತ್ಸವವನ್ನು ಹ್ಯಾರಿಸ್ ನಾಟಕ ಎಂದು ಕರೆದಿದ್ದರು. ಹ್ಯಾರಿಸ್ ಅವರ ಭಾಷಣ ವೈರಲ್ ಆಗಿದ್ದು, ಟೀಕೆ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಶಾಸಕರು ಸಾಮಾಜಿಕ ಜಾಲತಾಣದಲ್ಲಿ ಕ್ಷಮೆಯಾಚಿಸಿದ್ದರು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲಿಂಗ್ ಮತ್ತು ಟೀಕೆಗಳು ಮುಂದುವರಿದ ಕಾರಣ ದೇವಳಕ್ಕೆ ತೆರಳಿ ಕ್ಷಮೆಯಾಚಿಸಿದ್ದಾರೆ.
“ನನಗೆ ದೇವರ ಮೇಲೆ ಅಪಾರ ಗೌರವವಿದೆ. ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಕ್ಷಮೆ ಕೇಳಿದ್ದೇನೆ. ಬೆಂಗಳೂರಿನಲ್ಲಿ ಪ್ರತಿ ವರ್ಷ ನಡೆಯುವ ಕರಗ ಉತ್ಸವದಲ್ಲಿ ನಾನು ಸಹ ಭಾಗವಹಿಸುತ್ತೇನೆ” ಎಂದು ಹ್ಯಾರಿಸ್ ಹೇಳಿದರು.
ಕರಗ ಸಮಿತಿ ಅಧ್ಯಕ್ಷ ಸತೀಶ್ ಮಾತನಾಡಿ, ಶಾಸಕ ಹ್ಯಾರಿಸ್ ಈಗಾಗಲೇ ಕ್ಷಮೆಯಾಚಿಸಿದ್ದಾರೆ. ಅವರು ದೇವಸ್ಥಾನಕ್ಕೆ ಬಂದು ಕ್ಷಮೆಯಾಚಿಸಿದ್ದಾರೆ. ಮುಂದೆ ಎಲ್ಲ ಸಮುದಾಯದವರು ಈ ಬಗ್ಗೆ ಮಾತನಾಡದಂತೆ ವಿನಂತಿಸುತ್ತೇನೆ. ಕರಗ ಉತ್ಸವ ಬಗ್ಗೆ ಕೀಳಾಗಿ ಮಾತನಾಡಬೇಡಿ ಎಂದು ವಿನಂತಿಸಿದರು.