ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಮುಂದಿನ ಮೂರು-ನಾಲ್ಕು ದಿನಗಳಲ್ಲಿ ಎರಡನೇ ಪಟ್ಟಿ ಪ್ರಕಟಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಮಾತನಾಡಿದ ಅವರು ಶೇ 95 ರಷ್ಟು ಹಾಲಿ ಶಾಸಕರಿಗೆ ಟಿಕೇಟ್ ದೊರೆಯಲಿದ್ದು, ಕೆಲ ಕ್ಷೇತ್ರಗಳಲ್ಲಿ ಸಂಧಾನ ಮಾತುಕತೆ ನಡೆಯುತ್ತಿದ್ದು, ಎರಡನೇ ಪಟ್ಟಿಯಲ್ಲಿ ಉಳಿದ ಹೆಸರುಗಳು ಪ್ರಕಟವಾಗಲಿದೆ ಎಂದರು. ನಂಜನಗೂಡು ಕ್ಷೇತ್ರದಲ್ಲಿ ಧ್ರುವನಾರಾಯಣ ಸ್ಪರ್ಧಿಸಬೇಕಿತ್ತು. ಆದರೆ ಅವರು ನಮ್ಮನ್ನು ಅಗಲಿದ್ದಾರೆ. ಹೀಗಾಗಿ ಯುವ ಕೋಟದಿಂದ ಅವರ ಪುತ್ರನಿಗೆ ಟಿಕೇಟ್ ನೀಡಿದ್ದೇವೆ ಎಂದರು.
ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರವಾಗಿ ಕೇಳಿದಾಗ ಮತ್ತೊಂದು ಕ್ಷೇತ್ರದಿಂದ ಸ್ಪರ್ಧಿಸಬಹುದೇ ಎಂದು ಕೇಳಿದಾಗ ಕ್ಷೇತ್ರ ಆಯ್ಕೆಯನ್ನು ಸಿದ್ದರಾಮಯ್ಯ ವಿವೇಚನೆಗೆ ಬಿಡಲಾಗಿತ್ತು .ಅವರು ವರುಣಾದಿಂದ ಸ್ಪರ್ಧಿಸಲು ಇಚ್ಛಿಸಿದ್ದು, ಟಿಕೇಟ್ ನೀಡಲಾಗಿದೆ ಎಂದರು.
ಕೋಲಾರ, ಬಾದಾಮಿಯಲ್ಲಿ ಟಿಕೇಟ್ ಘೋಷಣೆಯಾಗದ ಕಾರಣ ಸಿದ್ದರಾಮಯ್ಯ ಅವರು ಮತ್ತೊಂದು ಕ್ಷೇತ್ರದಿಂದ ಸ್ಪರ್ಧಿಸಬಹುದೇ ಎಂದು ಕೇಳಿದಾಗ ಈ ಪ್ರಶ್ನೆಯನ್ನು ಪಕ್ಷದ ಹೈ ಕಮಾಂಡ್ಗೆ ಕೇಳಬೇಕು ಎಂದರು.