ಬೆಂಗಳೂರು: 2024ರಲ್ಲಿ ಅಧಿಕಾರ ಹಿಡಿಯಲೇ ಬೇಕೆಂಬ ಕಸರತ್ತಿಗಿಳಿದಿರುವ ಕಾಂಗ್ರೆಸ್ ಇದೀಗ ಒಗ್ಗಟ್ಟಿನ ಜಪದೊಂದಿಗೆ ಬಡವರು, ಮಹಿಳೆಯರು ಮತ್ತು ಯುವ ಮತದಾರರನ್ನು ಸೆಳೆಯಲು ಮಾಡಿರುವ ಉಚಿತ ಭಾಗ್ಯಗಳು ಬಿಜೆಪಿ ಮತ್ತು ಜೆಡಿಎಸ್ ನ ನಿದ್ದೆಗೆಡಿಸಿದೆ.
ಕಳೆದೊಂದು ವರ್ಷದಿಂದ ಆಡಳಿತರೂಢ ಬಿಜೆಪಿ ವಿರುದ್ಧ ಹೋರಾಟ ನಡೆಸಿಕೊಂಡು ಬಂದಿರುವ ಕಾಂಗ್ರೆಸ್ ಕಳೆದ ಆರು ತಿಂಗಳಿನಿಂದ ಎಡೆಬಿಡದೆ ಹೋರಾಟ ಮಾಡಿ ಸರ್ಕಾರವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಜತೆಗೆ ಆಡಳಿತ ಪಕ್ಷದಲ್ಲಿಯೂ ಎಲ್ಲವೂ ಸರಿಯಿಲ್ಲ ಎಂಬುದು ಸಾಬೀತಾಗಿದ್ದು, ಹೀಗಾಗಿ ಕಾಂಗ್ರೆಸ್ ಹುಮ್ಮಸ್ಸಿನಲ್ಲಿದ್ದು, ಗೆಲುವು ನಮ್ಮದೇ ಎಂಬ ಆತ್ಮವಿಶ್ವಾಸದಲ್ಲಿದೆ. ಜತೆಗೆ ಬಡವರು, ಮಹಿಳೆಯರು, ಯುವಕ-ಯುವತಿಯರನ್ನು ಟಾರ್ಗೆಟ್ ಮಾಡಿದ್ದು, ಅವರನ್ನು ಸೆಳೆಯುವ ಸಲುವಾಗಿಯೇ 4 ಯೋಜನೆಗಳ ಭರವಸೆಯನ್ನು ನೀಡಿದ್ದಾರೆ.
ಈ ಯೋಜನೆಗಳು ಆಕರ್ಷಕವಾಗಿವೆ. ಜತೆಗೆ ಬಡವರಲ್ಲಿ ಈ ಯೋಜನೆ ಬಗ್ಗೆ ಆಸೆಯೂ ಚಿಗುರಿದೆ. ಹೀಗಾಗಿ ಅವರು ಇದರತ್ತ ಬಹುಬೇಗ ಆಕರ್ಷಿತರಾಗುವ ಸಾಧ್ಯತೆಯಿದ್ದು ಹಾಗೇನಾದರೂ ಆದರೆ ಕಾಂಗ್ರೆಸ್ ಗೆ ಅಧಿಕಾರ ದೆಸೆ ವಕ್ಕರಿಸಲಿದೆ. ಈ ನಡುವೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ರಾಜ್ಯಕ್ಕೆ ಎಂಟ್ರಿಕೊಟ್ಟಿದ್ದು, ಯುವ ಜನರ ಸೆಳೆಯುವ ಸಲುವಾಗಿ ನಾಲ್ಕು ಯೋಜನೆಗಳಿಗೆ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಿ ಹೋಗಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನೀಡಿರುವ ಭರವಸೆಯೇ ಚುನಾವಣಾ ಪ್ರಚಾರಕ್ಕೆ ಹೆಚ್ಚಿನ ಮೈಲೇಜ್ ನೀಡುತ್ತಿದೆ.
ಬಿಜೆಪಿ ಯುವ ಮತದಾರರನ್ನು ಟಾರ್ಗೆಟ್ ಮಾಡಿದ್ದು, ಅವರ ಸೆಳೆಯುವ ಸಲುವಾಗಿಯೇ ಮೋದಿ ಈ ಹಿಂದೆ ಬಂದು ಹೋಗಿದ್ದರು. ಅಷ್ಟೇ ಅಲ್ಲದೆ ಆಗಾಗ್ಗೆ ರಾಜ್ಯಕ್ಕೆ ಭೇಟಿ ನೀಡುತ್ತಾ ಯುವ ಮತದಾರರ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಿರುವಾಗಲೇ ಕಾಂಗ್ರೆಸ್ ಹೊಸ ತಂತ್ರ ಪ್ರಯೋಗಿಸಿದ್ದು, ಯುವ ಮತದಾರರ ಸೆಳೆಯಲು ನಿರುದ್ಯೋಗಿ ಭತ್ಯೆ ನೀಡುವ ಬಗ್ಗೆ ಯೋಜನೆ ಘೋಷಿಸಿದೆ. ಇದರ ಹಿಂದೆ ಮತಬೇಟೆಯ ತಂತ್ರ ಅಡಗಿರುವುದನ್ನು ಅಲ್ಲಗಳೆಯುವಂತಿಲ್ಲ. ಹಾಗೆಯೇ ಮಹಿಳೆಯರು ಮತ್ತು ಬಡವರ ಮತದ ಮೇಲೆ ಕಣ್ಣಿಟ್ಟು ಮನೆಯ ಯಜಮಾನಿಗೆ 2000ರೂ ಭತ್ಯೆ, ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ, 200 ಯೂನಿಟ್ ವಿದ್ಯುತ್ ಉಚಿತ ಹೀಗೆ ಎಲ್ಲ ವರ್ಗದವರ ಗಮನಸೆಳೆಯುವ ಕೆಲಸವನ್ನು ಮಾಡಿದೆ.
ಕಾಂಗ್ರೆಸ್ ಪ್ರಕಟಿಸಿರುವ ಯೋಜನೆಗಳು ಬರೀ ಭರವಸೆಗಳು ಆಗಿದ್ದರೂ ಕೂಡ ಅದನ್ನು ತಳಮಟ್ಟದವರೆಗೆ ತೆಗೆದುಕೊಂಡು ಹೋಗುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಈ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯನಾ? ಇದರಿಂದ ಬಡವರ ಉದ್ಧಾರ ಆಗುತ್ತೋ ಇಲ್ಲವೋ? ಆದರೆ ಬಿಜೆಪಿಗೆ ಸೆಡ್ಡು ಹೊಡೆದು ಎಲ್ಲ ವರ್ಗದ ಮತಗಳನ್ನು ಸೆಳೆದು ಅಧಿಕಾರಕ್ಕೆ ತರುವುದು ಕಾಂಗ್ರೆಸ್ ನಾಯಕರ ಪ್ರಮುಖ ಉದ್ದೇಶವಾಗಿದೆ.
ಈಗಾಗಲೇ ಪ್ರಕಟಿಸಲಾಗಿರುವ ಉಚಿತ ಯೋಜನೆ ಆಕರ್ಷಕವಾಗಿದೆ. ಯುವ ಮತದಾರರು, ಬಡವರು, ಮಹಿಳೆಯರು ಎಲ್ಲರೂ ಇಷ್ಟಪಡುವ ಯೋಜನೆಯಾಗಿದೆ. ಸಾಮಾನ್ಯವಾಗಿ ಚುನಾವಣೆ ಸಂದರ್ಭ ಎಲ್ಲ ಪಕ್ಷಗಳ ಪ್ರಣಾಳಿಕೆ ಆಕರ್ಷಕವಾಗಿಯೇ ಇರುತ್ತದೆ. ಏಕೆಂದರೆ ಈ ಪ್ರಣಾಳಿಕೆಯೂ ಕೆಲವೊಮ್ಮೆ ಪಕ್ಷಕ್ಕೆ ಗೆಲುವು ತಂದುಕೊಡುತ್ತದೆ. ಇದೀಗ ಹೊರಡಿಸಿರುವ ಕಾಂಗ್ರೆಸ್ ನ ಉಚಿತ ಯೋಜನೆಗಳು ಜನರನ್ನು ತಲುಪಿ ಮತವಾಗಿ ಹೇಗೆ ಪರಿವರ್ತನೆಯಾಗುತ್ತದೆ ಎಂಬುದರ ಬಗ್ಗೆ ಎಲ್ಲರಲ್ಲೂ ಕುತೂಹಲ ಇದ್ದೇ ಇದೆ ಆದರೆ ಪ್ರಬುದ್ಧ ಮತದಾರರ ಏನು ಮಾಡುತ್ತಾನೆ ಎಂಬುದೇ ಎಲ್ಲರನ್ನು ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.