ನೆಲಮಂಗಲ: ಯುವಕನೊಬ್ಬ ಪ್ರಿಯತಮೆಗೆ ವಿಡಿಯೋ ಕಾಲಿಂಗ್ ಮಾಡುತ್ತಲೇ ಸಾವನಪ್ಪಿರುವ ಘಟನೆ ಡಾಬಸ್ಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಸೋಂಪುರ ಹೋಬಳಿ ದಾನೇನಹಳ್ಳಿ ಕಿರಣ್ (22). ಮೃತಪಟ್ಟ ಯುವಕ.
ಕಿರಣ್ ಗೆ ಎರಡು ತಿಂಗಳ ಹಿಂದೆ ನಾಯಿ ಕಚ್ಚಿದ್ದು, ಅದಕ್ಕೆ ಚಿಕಿತ್ಸೆ ಪಡೆಯದೇ ಸೋಂಕು ಹೆಚ್ಚಾಗಲು ಕಾರಣವೆಂದು ಹೇಳಲಾಗಿದೆ. ಯುವಕ ನೆಲಮಂಗಲ ಸರ್ಕಾರಿ ಆಸ್ಪತ್ರೆ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದು, ನಂತರ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಅಲ್ಲಿಯೇ ಕೊನೆಯುಸಿರು ಎಳೆದಿದ್ದಾನೆ. ಈತನ್ಮಧ್ಯೆ ಸಾಯುವ ಕ್ಷಣಗಳು ಸಮೀಪಿಸುತ್ತಿದೆ ಎನಿಸಿ ಪ್ರಿಯತಮೆಗಾಗಿ ವಿಡಿಯೋ ಮಾಡಿದ್ದ ಎನ್ನಲಾಗಿದೆ.
ಬಂಗಾರಿ ಬಿಟ್ಟು ಹೋಗುತ್ತಿದ್ದೇನೆ ಎಂದಿದ್ದ: ವಿಡಿಯೋ ರೆಕಾರ್ಡ್ ನಲ್ಲಿ ತನ್ನ ಪ್ರೀತಿಸುವ ಹುಡುಗಿಯನ್ನು ಅಂತ್ಯಕ್ರಿಯೆಗೆ ಅಹ್ವಾನ ನೀಡಿರುವ ಯುವಕ, ಹಾಯ್ ಬಂಗಾರಿ ನಿಮ್ಮನ್ನೆಲ್ಲ ಬಿಟ್ಟು ಹೋಗುತ್ತಿದ್ದೇನೆ ಕಣೆ, ನಿಮ್ಮ ಅಪ್ಪ ಹೇಳಿದ ಹಾಗೆ ಒಳ್ಳೆಯ ಹುಡುಗನನ್ನು ಮದುವೆ ಆಗು, ನಿನಗೆ ಹುಟ್ಟಿದ ಮಗುವಿಗೆ ನನ್ನ ಹೆಸರೇ ಇಡಬೇಕು, ಇದು ನನ್ನ ಆಕಸ್ಮಿಕ ಸಾವು, ದಯವಿಟ್ಟು ಅಂತ್ಯ ಕ್ರಿಯೆಗೆ ಬಂದು ಹೋಗಬೇಕು, ನನ್ನ ಅಂತ್ಯ ಕ್ರಿಯೆಗೆ ನಿನ್ನ ತಂಗಿಯನ್ನು ಕರೆದುಕೊಂಡು ಬಾ, ನಿಮ್ಮನ್ನೆಲ್ಲಾ ಬಿಟ್ಟು ಹೋಗುತ್ತಿದ್ದೇನೆ ಕಣೆ, ಒಳ್ಳೆಯದಾಗಲಿ, ನಿಮ್ಮ ಕುಟುಂಬ ಹೀಗೆ ಚೆನ್ನಾಗಿರಲೆಂದು ಲೈವ್ನಲ್ಲೇ ಕೈ ಮುಗಿದು ಪ್ರಾಣ ಬಿಟ್ಟಿದ್ದಾನೆ.