ಬೆಂಗಳೂರು: ಬೆಂಗಳೂರಿನ ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಇಂದು (ಸೋಮವಾರ) ಬೆಳಗ್ಗೆ 10 ಗಂಟೆಗೆ ಸಚಿವ ರಾಮಲಿಂಗಾ ರೆಡ್ಡಿ ಅವರುಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಪರಿಷೆಗೆ ಸುಮಾರು ಏಳು ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ.
ಇಂದು ಬೆಳಗ್ಗೆ ದೊಡ್ಡಗಣಪತಿ ಹಾಗೂ ಬಸವಣ್ಣ ದೇವರಿಗೆ ವಿಶೇಷ ಅಭಿಷೇಕ ನಡೆಸುವ ಮೂಲಕ ಪರಿಷೆ ಆರಂಭವಾಗಲಿದೆ. ಇಂದಿನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಆಗಮಿಸಲಿದ್ದಾರೆ.
ಸೋಮವಾರ ಅಧಿಕೃತವಾಗಿ ಕಡಲೆಕಾಯಿ ಪರೀಷೆ ಆರಂಭವಾದರೂ ಸಹಿತ ಎರಡು ದಿನದಿಂದಲೇ ಜನರು ಬಸವನಗುಡಿಯತ್ತ ಆಗಮಿಸುತ್ತಿದ್ದಾರೆ. ವಿವಿಧ ಬಗೆಯ ಹಸಿ, ಒಣ ಮತ್ತು ಹುರಿದ ಕಡಲೆಕಾಯಿಗಳು ಇಲ್ಲಿ ಲಭ್ಯವಿದೆ. ಹೊರ ಜಿಲ್ಲೆಗಳು, ಹೊರ ರಾಜ್ಯಗಳಿಂದ ರೈತರು ಕಡಲೆಕಾಯಿ ತಂದು ವ್ಯಾಪಾರ ನಡೆಸುತ್ತಿದ್ದಾರೆ.
ಪರಿಷೆಯಲ್ಲಿ ಸುಮಾರು 3000 ಅಧಿಕ ಮಳಿಗೆಗಳನ್ನು ಹಾಕಲಾಗಿದೆ. ಒಂದು ಸೇರಿಗೆ 30-40 ರೂಪಾಯಿಗೆ ಕಡಲೆಕಾಯಿ ಮಾರಾಟವಾಗುತ್ತಿವೆ. ಈ ಪರಿಷೆಯಲ್ಲಿ ಬರೀ ಕಡಲೆಕಾಯಿ ಮಳಿಗೆಗಳು ಮಾತ್ರವಲ್ಲ, ಜೊತೆಗೆ ತಿಂಡಿ ತಿನಿಸುಗಳ ಮಳಿಗೆಗಳು, ತಂಪು ಪಾನೀಯ ಅಂಗಡಿಗಳು, ಮನೆ ಅಲಂಕಾರಿಕ ವಸ್ತುಗಳು, ಮಕ್ಕಳ ಆಟಿಕೆಗಳು ಜನರನ್ನು ಕೈಬೀಸಿ ಕರೆಯುತ್ತಿವೆ.
ಒಟ್ಟಾರೆಯಾಗಿ ಬಸವನಗುಡಿ ರಸ್ತೆಗಳು ಮತ್ತು ದೇವಸ್ಥಾನದ ಆವರಣದಲ್ಲಿ ವಿದ್ಯುತ್ ಅಲಂಕಾರ ಮಾಡಲಾಗಿದ್ದು, ಮಧುವಣಗಿತ್ತಿಯಂತೆ ಪರಿಷೆಗೆ ಸಜ್ಜಾಗಿದೆ.