ಬೆಂಗಳೂರು : ನಗರದ ಕುರುಬರಹಳ್ಳಿ ವೃತ್ತದ ಬಳಿ ಎಟಿಎಂ ಗ್ರಾಹಕರನ್ನು ಗುರಿಯಾಗಿಸಿಕೊಂಡು ವಂಚನೆಗೆ ಯತ್ನಿಸುತ್ತಿದ್ದ ಇಬ್ಬರು ಯುವಕರನ್ನು ಸ್ಥಳೀಯರು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ರಾಜಕುಮಾರ್ ಪ್ರತಿಮೆ ಸಮೀಪದ ಎಟಿಎಂ ಕೇಂದ್ರಗಳಲ್ಲಿ ಹಣ ತೆಗೆಯಲು ಬರುವ ಸಾರ್ವಜನಿಕರು, ವಿಶೇಷವಾಗಿ ವಯೋವೃದ್ಧರು ಹಾಗೂ ಎಟಿಎಂ ಕಾರ್ಡ್ ಬಳಕೆ ಬಗ್ಗೆ ಅರಿವು ಕಡಿಮೆ ಇರುವವರನ್ನು ಈ ಆರೋಪಿಗಳು ಗುರಿಯಾಗಿಸಿಕೊಂಡಿದ್ದರು ಎನ್ನಲಾಗಿದೆ.

ಸಹಾಯ ಮಾಡುವ ನೆಪದಲ್ಲಿ ಕಾರ್ಡ್‌ಗಳನ್ನು ಬದಲಾಯಿಸಿ ಹಣ ದೋಚಲು ಯತ್ನಿಸುತ್ತಿದ್ದ ವೇಳೆ ಸಾರ್ವಜನಿಕರ ಎಚ್ಚರಿಕೆಯಿಂದ ಸಿಕ್ಕಿಬಿದ್ದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.