ಬೆಂಗಳೂರು: ಗಡ್ಡ ಶೇವ್ ಮಾಡಿಲ್ಲವೆಂದು ಸೀನಿಯರ್‌ಗಳು ಜೂನಿಯರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ನಡೆದಿದೆ. ಮೂವರು ವಿದ್ಯಾರ್ಥಿಗಳ ಮೇಲೆ ಬೆಳ್ಳಂದೂರು ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.

ಹಲ್ಲೆಗೊಳಗಾದ ವಿದ್ಯಾರ್ಥಿ ಕೇರಳ ಮೂಲದನಾಗಿದ್ದು, ದೊಡ್ಡ ಸಿದ್ದಾಪುರದಲ್ಲಿ ಸ್ನೇಹಿತರ ಜೊತೆ ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿದ್ದನು. ಈತನನ್ನು ಆಗಸ್ಟ್ 30 ರಂದು ಕರೆ ಮಾಡಿ ಸಿದ್ದಾಪುರದ ಚರ್ಚ್ ಬಳಿ ಬರುವಂತೆ 3 ಬಾರಿ ಕಾಲ್ ಮಾಡಿ ಸೀನಿಯರ್‌ಗಳು ಕರೆಸಿಕೊಂಡಿದ್ದರು.

ವಿದ್ಯಾರ್ಥಿ ಬರುವಾಗಲೇ ಗಡ್ಡ ಹಾಗೂ ಮೀಸೆ ಟ್ರಿಮ್ ಮಾಡುವಂತೆ ಒತ್ತಾಯ ಮಾಡಿದ್ದು, ಇದನ್ನು ನಿರಾಕರಣೆ ಮಾಡಿದಾಗ ಆತನ ಮೇಲೆ ಅದೇ ಕಾಲೇಜಿನ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ವಿದ್ಯಾರ್ಥಿ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಅವರ ದೂರಿನ ಆಧಾರದಲ್ಲಿ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಘಟನೆಯ ಕುರಿತಾಗಿ ಪೊಲೀಸರಿಂದ ತನಿಖೆ ನಡೆಸಲಾಗುತ್ತಿದೆ.