ಬೆಂಗಳೂರು: ಕಿಡಿಗೇಡಿಗಳು ಖಾಸಗಿ ಆಂಬುಲೆನ್ಸ್ನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ಮಾಡಿದ ಘಟನೆ ನೆಲಮಂಗಲ ಟೋಲ್ ಬಳಿ ನಡೆದಿದೆ.
ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಯಲಚೇನಹಳ್ಳಿ ಮೂಲದ ಯುವರಾಜ್ ಸಿಂಗ್, ಮಂಜುನಾಥ್ ಮತ್ತು ಲತೀಶ್ ಎಂದು ಗುರುತಿಸಲಾಗಿದೆ.
ಭಾನುವಾರ ಸಂಜೆ ಕುಡಿದ ನಶೆಯಲ್ಲಿದ್ದ ನಾಲ್ವರು ದುಷ್ಕರ್ಮಿಗಳು ಕಾರಿನಲ್ಲಿ ಆಂಬುಲೆನ್ಸ್ನ್ನು 5 ಕಿ.ಮೀ ಚೇಸ್ ಮಾಡಿ ಅಡ್ಡಗಟ್ಟಿದ್ದಾರೆ. ಬಳಿಕ ನಾಲ್ವರು ಸೇರಿ ಚಾಲಕನನ್ನು ಹೊರಗೆಳೆದು, ಅತಿ ವೇಗವಾಗಿ ಚಾಲನೆ ಮಾಡುತ್ತಿರುವುದಾಗಿ ಗಲಾಟೆ ಆರಂಭಿಸಿದ್ದಾರೆ. ಈ ವೇಳೆ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಂಬುಲೆನ್ಸ್ ಚಾಲಕ ಜಾನ್ ಆರೋಪಿಸಿದ್ದಾರೆ.
ತುಮಕೂರಿನ ಖಾಸಗಿ ಆಸ್ಪತ್ರೆಯಿಂದ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಖಾಸಗಿ ಆಂಬುಲೆನ್ಸ್ ಬರುತ್ತಿತ್ತು. ಆಂಬುಲೆನ್ಸ್ನಲ್ಲಿ ಐದು ತಿಂಗಳ ಮಗುವಿಗೆ ತುರ್ತು ಚಿಕಿತ್ಸೆಗೆ ಆಕ್ಸಿಜನ್ ಮೂಲಕ ಕರೆ ತರಲಾಗುತ್ತಿತ್ತು. ಮಗುವಿನ ಸ್ಥಿತಿ ಗಂಭೀರವಾಗಿದೆ, ತುರ್ತು ಚಿಕಿತ್ಸೆಗೆ ಮಗುವನ್ನು ಕರೆದೊಯ್ಯುತ್ತಿದ್ದೇವೆ ಎಂದರು ಮಗುವಿನ ಪೋಷಕರು ಕೈ ಮುಗಿದರೂ ಕಾರಿನಲ್ಲಿದ್ದ ಯುವಕರು, ಕೀ ಕಿತ್ತುಕೊಳ್ಳಲು ಯತ್ನಿಸಿದ್ದಾರೆ.
ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಲಾಟೆ ತಿಳಿಗೊಳಿಸಿ ಆಂಬುಲೆನ್ಸ್ನ್ನು ಆಸ್ಪತ್ರೆಗೆ ಕಳಿಸಿದ್ದರು.

