ಬೆಂಗಳೂರು: ಒಂದಿಲ್ಲೊಂದು ಹೊಸತನಗಳ ಮೂಲಕ ತನ್ನ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ನೀಡುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಇದೀಗ ಮತ್ತೊಮ್ಮೆ ಗುಡ್ನ್ಯೂಸ್ ನೀಡಿದೆ.
ಇಂದಿನಿಂದ (ಫೆ.5) ನೂತನ 100 ಅಶ್ವಮೇಧ ಬಸ್ಗಳು ಕಾರ್ಯಾರಂಭ ಮಾಡಲಿದ್ದು, ಬೆಂಗಳೂರಿನ ವಿಧಾನಸೌಧ ಮುಂಭಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹೊಸ ಬಸ್ಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಬೆಳಗ್ಗೆ 10 ಗಂಟೆಗೆ ಅಶ್ವಮೇಧ ಬಸ್ಗಳು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ. ಈ ನೂತನ ಬಸ್ಗಳಿಗೆ ಅಶ್ವಮೇಧ ಕ್ಲಾಸಿಕ್ ಎಂದು ನಾಮಕರಣ ಮಾಡಲಾಗಿದ್ದು, ಪ್ರಯಾಣದ ಮರುಕಲ್ಪನೆ ಎಂಬ ಘೋಷ ವಾಕ್ಯವನ್ನು ನೀಡಲಾಗಿದೆ. ರಾಜಧಾನಿ ಬೆಂಗಳೂರು ಹಾಗೂ ಬಹುತೇಕ ಜಿಲ್ಲಾ ಕೇಂದ್ರಗಳ ನಡುವೆ ಈ ಬಸ್ಗಳು ಸಂಚಾರ ನಡೆಸಲಿವೆ.
ಈ ಬಸ್ಗಳು 52 ಆಸನಗಳನ್ನು ಒಳಗೊಂಡಿದ್ದು, ಮುಂಭಾಗ ಮತ್ತು ಹಿಂಭಾಗದ ಎಲ್ಇಡಿ ಡೆಸ್ಟಿನೇಶನ್ ಬೋರ್ಡ್ಗಳನ್ನು ಪಡೆದಿರುತ್ತವೆ. ಜೊತೆಗೆ ಇವು ಸೆನ್ಸರ್ ಚಾಲಿತ ನ್ಯೂಮ್ಯಾಟಿಕ್ ಡೋರ್ (ಬಾಗಿಲು) ಮತ್ತು ಎಮರ್ಜೆನ್ಸಿ ಬಟನ್, ಮ್ಯಾಗಜೀನ್ (ನಿಯತಕಾಲಿಕೆ) ಮತ್ತು ವಾಟರ್ ಬಾಟಲ್ ಇಡಲು ಪೌಚ್ ಅನ್ನು ಸಹ ಹೊಂದಿದೆ. 800 ಬಸ್ಗಳ ಪೈಕಿ ಇಂದು ಸಿಎಂ ಸಿದ್ದರಾಮಯ್ಯ ಅವರು 100 ಬಸ್ಗಳಿಗೆ ಚಾಲನೆ ನೀಡಲಿದ್ದಾರೆ