ಬೆಂಗಳೂರು: ಹೆಸರಘಟ್ಟ ಆದಿಚುಂಚನಗಿರಿ ಶಾಖಾಮಠದ ಸ್ವಾಮೀಜಿ ವಿದ್ಯಾಧರನಾಥ ಶ್ರೀಗಳು ಗಂಭೀರ ಆರೋಪವೊಂದನ್ನ ಮಾಡಿದ್ದಾರೆ. ಕುಂಬಳಗೋಡು ಪ್ರಕಾಶನಾಥ ಸ್ವಾಮೀಜಿ ಹಾಗೂ ಶಿವಮೊಗ್ಗ ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿಯವರು ನನ್ನನ್ನು ಸಾಯಿಸಲು ಹೊಂಚು ಹಾಕಿದ್ದಾರೆ ಎಂದು ಸ್ವಾಮೀಜಿ ವಿದ್ಯಾಧರನಾಥ ಶ್ರೀ ಆರೋಪಿಸಿದ್ದಾರೆ.
ನಮಗೂ ಅವರಿಗೂ ಏನು ದ್ವೇಷವಿಲ್ಲ. ಅಧಿಕಾರಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ನಮಗಿಂತ ಮೇಲೆ ಬೆಳೆದು ಬಿಡ್ತಾರೆ ಅಂತ ಅಷ್ಟೇ. ಇದೆಲ್ಲ ನಿರ್ಮಲಾನಂದನಾಥ ಶ್ರೀ ದೊಡ್ಡವರ ಗಮನಕ್ಕೂ ಬಂದಿದೆ. ಆದ್ರು ಏನು ಕ್ರಮ ಕೈಗೊಳ್ಳುತ್ತಿಲ್ಲ. ಈ ಕೊಲೆ ಬೆದರಿಕೆಯ ಬಗ್ಗೆ ಎಲ್ಲರಿಗೂ ಗೊತ್ತಾದ ಮೇಲೆ ಅವರಿಗೆ ಗೊತ್ತಿರಲ್ವಾ. ಅವರಿಗೂ ಕೂಡ ಗೊತ್ತಿರುತ್ತೆ ಏನು ಮಾಡ್ತಿಲ್ಲ ಎಂದರು.
ಜೀವ ಬೆದರಿಕೆ ಇರುವ ಬಗ್ಗೆ ಮಾದನಾಯಕನಹಳ್ಳಿ ಪೊಲೀಸರಿಗೆ ದೂರು ಕೊಟ್ಟಿದ್ದೇನೆ. ಈ ಹಿಂದೆ ಗೃಹಸಚಿವ ಆರಗ ಜ್ಞಾನೇಂದ್ರ, ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿಯಾಗಿ ಅವರ ಗಮನಕ್ಕೆ ತಂದಿದ್ದೆ. ನನ್ನ ರಕ್ಷಣೆಗಾಗಿ ರಿವಾಲ್ವರ್ ಅನ್ನು ಕೂಡ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.