ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಮಾಡಿದ ಪ್ರಕರಣದಲ್ಲಿ ವಿಚಾರಣಾಧೀನ ಖೈದಿಯಾಗಿರುವ ಆರೋಪಿ ನಟ ದರ್ಶನ್ ಅವರ ಫೋಟೊವೊಂದು ವೈರಲ್ ಆಗ್ತಿದೆ. 65 ದಿನಗಳಿಂದ ಜೈಲಿನಲ್ಲಿರುವ ನಟ ದರ್ಶನ್ ಜೈಲಿನಲ್ಲಿ ಸಿಗರೇಟ್ ಸೇದುತ್ತಿರುವ ಫೋಟೋವೊಂದು ವೈರಲ್ ಆಗಿದೆ.
ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ಕುಳಿತು ಬೆಂಗಳೂರಿನ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಜೊತೆಗೆ ಕುಳಿತುಕೊಂಡು ದರ್ಶನ್ ಸಿಗರೇಟ್ ಸೇದುತ್ತಿರುವುದು ಫೋಟೋದಲ್ಲಿ ಕಂಡುಬಂದಿದೆ. ಪ್ಲಾಸ್ಟಿಕ್ ಚಯರ್ ನಲ್ಲಿ ಕುಳಿತುಕೊಂಡಿರುವ ದರ್ಶನ್, ಒಂದು ಕೈನಲ್ಲಿ ಟೀ ಕಪ್ ಮತ್ತು ಇನ್ನೊಂದು ಕೈನಲ್ಲಿ ಸಿಗರೇಟ್ ಹಿಡಿದುಕೊಂಡಿದ್ದಾರೆ. ಜೊತೆಗೆ ಮತ್ತೊಬ್ಬ ಕೈದಿಯಾಗಿರುವ ಮ್ಯಾನೇಜರ್ ನಾಗರಾಜ್ ಕೂಡ ಇದ್ದಾನೆ. ದರ್ಶನ್ ಕೂದಲು ತೆಗೆದಿರುವುದು ಫೋಟೋದಲ್ಲಿ ಕಂಡುಬಂದಿದೆ. ಮತ್ತೋರ್ವ ಕುಳ್ಳ ಸೀನ ಎಂದು ತಿಳಿದುಬಂದಿದೆ. ಇನ್ನು ಈ ಫೋಟೊ ವೈರಲ್ ಆಗುತ್ತಿದ್ದಂತೆ ಜೈಲು ಅಧಿಕಾರಿಗಳ ನಡೆಯ ಬಗ್ಗೆ ಅನುಮಾನ ಮೂಡುವಂತಾಗಿದೆ.
ಮಾತ್ರವಲ್ಲ ಈ ಫೋಟೋ ಹೇಗೆ ಹೊರಗಡೆ ಬಂತು ಎಂಬ ಕಥೆ ಕೂಡ ಕುತೂಹಲವಾಗಿದೆ. ವೇಲು ಅನ್ನುವ ಖೈದಿ ಈ ಫೋಟೋವನ್ನು ತೆಗೆದಿದ್ದು, ತನ್ನ ಹೆಂಡತಿಗೆ ಆತ ಜೈಲಿನಿಂದ ಫೊಟೋ ಕಳುಹಿಸಿದ್ದ. ಈಗ ಅದು ಹೊರಬಂದಿದೆ. ಜೈಲಿನಲ್ಲಿ ನಿಯಮಗಳನ್ನು ಮೀರಿ ಖೈದಿಗಳಿಗೆ ಮದ್ಯ ಸಿಗರೇಟ್ ಸಪ್ಲೈ ಮಾಡಲಾಗುತ್ತಿದೆ ಎಂದು ಹಲವು ಬಾರಿ ಆರೋಪ ಕೇಳಿಬಂದಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಈ ಫೋಟೋ ಸಾಕ್ಷ್ಯ ಹೇಳುತ್ತಿದೆ

