ಬೆಂಗಳೂರು: ಆಕಸ್ಮಿಕವಾಗಿ ಕಾರು ಹರಿದು ಒಂದೂವರೆ ವರ್ಷದ ಮಗು ಮೃತಪಟ್ಟಿರುವ ಘಟನೆ ಎಚ್.ಎಸ್.ಆರ್. ಲೇಔಟ್ನ ಆಗರದಲ್ಲಿ ನಡೆದಿದೆ.
ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾರಿನ ಡೋರ್ ಬಳಿಯೇ ಮಗು ನಿಂತಿದ್ದನ್ನು ನೋಡದೆ ತಂದೆ ಮುಂದೆ ಸಾಗಿದ್ದರಿಂದ ದುರಂತ ನಡೆದಿದೆ.
ಒಂದೂವರೆ ವರ್ಷದ ಶೈಜಾ ಜನ್ನತ್ ಮೃತ ಮಗು. ಭಾನುವಾರ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸಂಬಂಧಿಗಳ ಮದುವೆ ಇದ್ದ ಕಾರಣ ಮಗುವಿನ ಕುಟುಂಬಸ್ಥರು ಚನ್ನಪಟ್ಟಣಕ್ಕೆ ಹೋಗಿದ್ದರು.
ರಾತ್ರಿ ಹಿಂದಿರುಗಿದಾಗ ಮಗುವಿನ ತಂದೆ ಲಗೇಜ್ ತೆಗೆದು ಮನೆಯೊಳಗೆ ಇಡುತ್ತಿದ್ದರು. ಈ ವೇಳೆ ತಂದೆ ಹಿಂದೆಯೇ ಬಂದಿದ್ದ ಮಗು ಡೋರ್ ಬಳಿ ನಿಂತಿತ್ತು. ಅದನ್ನು ಗಮನಿಸದೇ ಕಾರು ಮುಂದೆ ಚಲಿಸಿದಾಗ ಮಗುವಿನ ಮೇಲೆ ಹರಿದಿದೆ.
ಕಾರು ಹರಿದಿದ್ದರಿಂದ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಎಚ್.ಎಸ್.ಆರ್ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.