ಬೆಂಗಳೂರು: ಕಾರಿಗೆ ಬೈಕ್ ತಾಗಿದ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ವಿದ್ಯಾರಣ್ಯಪುರದಲ್ಲಿ ನಡೆದಿದೆ.

ಮಹೇಶ್ (21) ಹತ್ಯೆಯಾದ ಯುವಕ. ಕೊಲೆಯಾದ ಮಹೇಶ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದನು. ಬುಧವಾರ ರಾತ್ರಿ ಸುಮಾರು 7 ಗಂಟೆ ಸಮಯದಲ್ಲಿ ಜಿಕೆವಿಕೆ ಬಳಿ ಬೈಕ್‍ನಲ್ಲಿ ಸ್ನೇಹಿತರೊಂದಿಗೆ ತೆರಳುತ್ತಿದ್ದಾಗ ಆತನ ಬೈಕ್ ಕಾರೊಂದಕ್ಕೆ ತಾಗಿದೆ. ಈ ವೇಳೆ ಕಾರಿನಲ್ಲಿದ್ದ ಅರವಿಂದ್ ಹಾಗೂ ಕೇಶವ್ ಎಂಬವರು ಗಲಾಟೆ ಮಾಡಿದ್ದಾರೆ. ಗಲಾಟೆ ವಿಕೋಪಕ್ಕೆ ತಿರುಗಿ ಹತ್ಯೆಗೆ ಕಾರಣವಾಗಿದೆ.

ಗಲಾಟೆ ಬಳಿಕ ಮಹೆಶ್ ಬೈಕ್‍ನಲ್ಲಿ ಹೋಗುವಾಗ ಕಾರಿನಲ್ಲಿ ಕಿಲೋಮೀಟರ್‌ಗಟ್ಟಲೆ ಚೇಸ್ ಮಾಡಿ ಆರೋಪಿಗಳು ಬೈಕ್‍ಗೆ ಹಿಂದಿನಿಂದ ಅಪಘಾತವೆಸಗಿದ್ದಾರೆ. ಪರಿಣಾಮ ಬೈಕ್‍ನಲ್ಲಿದ್ದ ಮಹೇಶ್ ತಲೆ ರಸ್ತೆಯಲ್ಲಿದ್ದ ಪೋಲ್ ಹಾಗೂ ಗೋಡೆಗೆ ಬಡಿದಿದೆ. ಹೆಲ್ಮೆಟ್ ಹಾಕಿರದ ಕಾರಣ ಮೆದಳು ಹೊರಗಡೆ ಬಂದಿದ್ದು, ಸ್ಥಳದಲ್ಲೇ ಆತ ಮೃತಪಟ್ಟಿದ್ದಾನೆ.

ಪ್ರಕರಣ ವಿದ್ಯಾರಣ್ಯಪುರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದು, ಅರವಿಂದ್ ಹಾಗೂ ಕೇಶವ್‍ನನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.