ಬೆಂಗಳೂರು: ವಿಧಾನಸಭೆಯಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುತ್ತಿದ್ದ ಸಂದರ್ಭದಲ್ಲಿ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಘೋಷಣೆ ಕೂಗಿದ್ದ 7 ಮಂದಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಎ. ವಿಜಯಕುಮಾರ್, ಎಸ್.ವಿ. ಸುರೇಶ್, ಎಸ್.ವೇಣುಗೋಪಾಲ್, ಎಸ್.ಎಸ್. ವಿಜಯಶೇಖರ್, ಎಸ್.ವಿ. ಶ್ರೀನಿವಾಸ್, ಸತ್ಯೇಂದ್ರ ಕುಮಾರ್, ಎಂ ರಾಜರತ್ನಂ ಬಂಧಿತರು. ವಿಧಾನಸಭೆ ದಂಡನಾಯಕ ಹೆಚ್.ಎಸ್. ಜಯಕೃಷ್ಣ ಅವರು 7 ಮಂದಿಯ ವಿಚಾರಣೆ ನಡೆಸಿ ವಿಧಾನಸಭೆ ಪೊಲೀಸರಿಗೆ ಅವರನ್ನು ಒಪ್ಪಿಸಿದ್ದಾರೆ. ಬಳಿಕ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ.

ವಿಧಾನಸಭೆಯ ಸಾರ್ವಜನಿಕರ ಗ್ಯಾಲರಿ ಮತ್ತು ಸಭಾಧ್ಯಕ್ಷರ ಗ್ಯಾಲರಿಯಲ್ಲಿ 7 ಜನ ಬಜೆಟ್ ಅಧಿವೇಶನ ವೀಕ್ಷಿಸುತ್ತಿದ್ದರು. ಅಲ್ಲಿಂದ ಹೊರಡುವಾಗ, ಸದಾಶಿವ ಆಯೋಗ ವರದಿ ಜಾರಿಗೊಳಿಸಿ, ಒಳ ಮೀಸಲಾತಿ ಜಾರಿ ಮಾಡಿ ಎಂದು ಘೋಷಣೆ ಕೂಗಿದ್ದು, ಮಾರ್ಷಲ್ ಗಳು ಅವರನ್ನು ವಶಕ್ಕೆ ಪಡೆದು ಸದನದ ನಿಯಮಾವಳಿ ಉಲ್ಲಂಘನೆ, ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.